ಮಂಡ್ಯ ನಗರದ ಕಿರಗಂದೂರು ರಸ್ತೆಯಲ್ಲಿರುವ ಜೈಶಂಕರ್ ರೈಸ್ಮಿಲ್ನಲ್ಲಿ ದಾಖಲೆಯಿಲ್ಲದೆ ಸಂಗ್ರಹಿಸಿಟ್ಟಿದ್ದ ಸುಮಾರು 120 ಚೀಲ ಅಕ್ಕಿ ಮೂಟೆಗಳನ್ನು ಗುರುವಾರ ಸಂಜೆ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮಾಲೀಕರು ಕೆಲವೊಂದು ಬಿಲ್ಗಳನ್ನು ಹಾಜರುಪಡಿಸಿದ್ದರು. ಆದರೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಬಿಲ್ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಮೂರು ದಿನದೊಳಗೆ ಅಸಲಿ ಬಿಲ್ ಸಲ್ಲಿಸುವಂತೆ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಲಾಖೆ ಉಪನಿರ್ದೇಶಕ ಎಂ.ಪಿ. ಕೃಷ್ಣಕುಮಾರ್, 120 ಚೀಲಗಳಲ್ಲಿ ತುಂಬಿರುವ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.ಕಾನೂನು ರೀತಿ ಕ್ರಮ ಯಾವ ಕೈಗೊಳ್ಳಬೇಕೋ ಅದನ್ನು ಮಾಡಲಾಗುವುದು. ಅಕ್ಕಿಯ ಸ್ಯಾಂಪಲ್ನ್ನು ಸಹ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ಪಡಿತರ ಅಕ್ಕಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದರು.
ಕೈ ಬರಹದ ಬಿಲ್ ಹಾಜರುಪಡಿಸಿರುವುದರಿಂದ ನಮಗೆ ಅದರ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆನ್ಲೈನ್ ಬಿಲ್ನ್ನು ಅವರು ನೀಡಿಲ್ಲ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಬಿಲ್ ಕಳುಹಿಸಿ ಜಿಎಸ್ಟಿ ಪಾವತಿಸಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಮರೀಗೌಡ ಬಡಾವಣೆಯಲ್ಲಿರುವ ರೈಸ್ಮಿಲ್ನಿಂದ ಅಕ್ಕಿ ತರಲಾಗಿದೆ ಎಂದು ಮಾಲೀಕರು ತಿಳಿಸಿದ್ದು,ಹೀಗೆಯೇ ಇತರ ಕಡೆಯಿಂದ ಬಿಲ್ ಪಾವತಿಸಿ ಅಕ್ಕಿಯನ್ನು ಖರೀದಿಸಿ ತಂದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.