ಮಂಡ್ಯ ಜಿಲ್ಲೆಯಲ್ಲಿ ಸುಮಾರು 600 ಪ್ರೌಡಶಾಲೆಗಳಿದ್ದು, ಎಲ್ಲಾ ಪ್ರೌಢಶಾಲೆಗಳಿಗೂ ಜೂನಿಯರ್ ರೆಡ್ ಕ್ರಾಸ್ ಘಟಕದ ಪ್ರಥಮ ಚಿಕಿತ್ಸಾ ಕಿಟ್ ಲಭಿಸಲಿವೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜೂನಿಯರ್ ರೆಡ್ ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ವಿವಿಧ ಶಾಲೆಯ ಮುಖ್ಯಸ್ಥರಿಗೆ ವಿತರಿಸಿ ಅವರು ಮಾತನಾಡಿದರು.
ರೆಡ್ಕ್ರಾಸ್ ಸಂಸ್ಥೆಯು ಒಳ್ಳೆಯ ಸಮಾಜಸೇವೆ ಮಾಡುವ ಸಂಸ್ಥೆಯಾಗಿದೆ, ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿದೆ, ಹಲವಾರು ರಕ್ತದಾನ ಶಿಬಿರಗಳು, ವಿವಿಧ ರೀತಿಯ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡು ಬರುತ್ತಿದೆ. ಮುಂದುವರಿದ ಭಾಗವಾಗಿ ಒಂದು ಹೆಜ್ಜೆ ಮುಂದೆಸಾಗಿ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಹಂತಗಳಲ್ಲಿ ಜೂನಿಯರ್ ರೆಡ್ಕ್ರಾಸ್ ಸಂಸ್ಥೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ, ಇದು ಒಳ್ಳೆಯ ಕೆಲಸ ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಪ್ರಥಮ ಚಿಕಿತ್ಸಾ ಕಿಟ್ಗಳನ್ನು ಶಾಲೆಗಳಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಮಾತನಾಡಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ 1920ರಲ್ಲಿ ಪ್ರಾರಂಭವಾಯಿತು, ಸಂವಿಧಾನದ ಕಾನೂನಿನಡಿ ಬರುತ್ತದೆ, ಜಿಲ್ಲಾಧಿಕಾರಿ ಇದರ ಅಧ್ಯಕ್ಷರಾಗಿರುತ್ತಾರೆ, ಮಾನವೀಯತೆ, ಅಂತ:ಕರಣ ಹಾಗೂ ಸ್ನೇಹ ಸೌಹಾರ್ದತೆಯ ಹಂಚುವಂತಹ ಸಂಸ್ಥೆಯಾಗಿದೆ ಎಂದರು.
ಯುದ್ದ ದಿನಗಳಲ್ಲಿ ಗಾಯಳುಗಳನ್ನು ಉಪಚರಿಸಲು ಸ್ಥಾಪನೆಯಾದ ಈ ಸಂಸ್ಥೆ ಈಗ ಸೇವಾ ಸಂಸ್ಥೆಯಾಗಿದೆ, ಇಂದು ಎಲ್ಲಾ ಸೇವಾಕಾರ್ಯಗಳನ್ನು ಮಾಡಲು ಸಿದ್ದವಾಗಿದೆ, ಎಲ್ಲಿ ಅವಶ್ಯಕತೆಯ ಸೇವೆಗಳು ಬೇಕಾಗಿವೆಯೋ ಅಲ್ಲಿ ಸೇವಾ ಚಟುವಟಕೆಗಳನ್ನು ಸಮಾಜಕ್ಕೆ ಸಮರ್ಪಿಸುತ್ತ ನಡೆಯುತ್ತಿದೆ ಎಂದು ನುಡಿದರು.
ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲೆಯ ಸಿಇಓ ಮತ್ತು ಡಿಡಿಪಿಐ ಮುಖಾಂತರ ಎಲ್ಲಾ ಪ್ರೌಢಶಾಲೆಗಳಲ್ಲಿ 100 ರೂ ನೀಡಿ ಜೂನಿಯರ್ ರೆಡ್ ಕ್ರಾಸ್ ಘಟಕದ ನೋಂದಣಿ ಮಾಡಿಸುವುದು, ಸರ್ಕಾರದ ಸುತ್ತೋಲೆ ತಡವಾಗಿದೆ, ಶಾಲೆಗಳಿಗೆ ಮಾಹಿತಿ ನೀಡಲಾತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಇಓ ಉದಯಕುಮಾರ್, ಶಿಕ್ಷಣಾಧಿಕಾರಿ ಚಂದ್ರಕಾಂತ, ಕೃಷಿಕ್ ಲಯನ್ಸ್ ಸಂಸ್ಥೆಯ \ಕೆ ಟಿ ಹನುಮಂತು, ಮಂಗಲ ಯೋಗೇಶ್, ಜವರೇಗೌಡ, ಷಡಕ್ಷರಿ, ಜಗದೀಶ್ ಮತ್ತಿತರರಿದ್ದರು.