ಮಂಡ್ಯ ಜಿಲ್ಲೆಯ ವಿವಿಧೆಡೆ ಸರಗಳ್ಳತನ ಮಾಡಿದ ಆರೋಪಿ ಮಹಿಳೆಯನ್ನು ಮಳವಳ್ಳಿ ತಾಲ್ಲೂಕಿನ ಹಲಗೂರು ಪೊಲೀಸರು ಬಂಧಿಸಿ, ಆಕೆಯಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಳವಳ್ಳಿ ತಾಲ್ಲೂಕಿನ ದಡದಪುರ ಗ್ರಾಮದ ಸಾವಿತ್ರಿ (45) ಸರಗಳ್ಳತನ ಮಾಡಿದ ಮಹಿಳಾ ಆರೋಪಿ ಯಾಗಿದ್ದಾರೆ.
ಘಟನೆ ವಿವರ
ಹಲಗೂರು ಪೊಲೀಸ್ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಗಳು ಕಳೆದ ಜ.13ರಂದು ಗಸ್ತಿನಲ್ಲಿದ್ದಾಗ ಹಲಗೂರು ಬಸ್ ನಿಲ್ದಾಣದ ಬಳಿ ಒಬ್ಬ ಮಹಿಳೆಯು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂತು. ಆಗ ಮಹಿಳಾ ಪೊಲೀಸರ ಸಹಾಯದಿಂದ ಆಕೆಯನ್ನು ವಿಚಾರಣೆ ಮಾಡಿದಾಗ ಆಕೆಯು ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಆರೋಪಿ ಮಹಿಳೆಯು ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ಗ್ರಾಂ ತೂಕದ ಚಿನ್ನದ ಒಡವೆಗಳನ್ನು, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 32 ಗ್ರಾಂ ಚಿನ್ನ ಚಿನ್ನಾಭರಣ, ಮಂಡ್ಯ ಪಶ್ಚಿಮ ಪೊಲೀಸ್ 40 ಗ್ರಾಂ ಹಾಗೂ 24 ಗ್ರಾಂ ಚಿನ್ನಾಭರಣ ಹಾಗೂ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಿರುವುದಾಗಿ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾಳೆ. ಪೊಲೀಸರ ಈ ಕಾರ್ಯಾಚರಣೆಯನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠರು ಶ್ಲಾಘಿಸಿದ್ದಾರೆ.