✍️ ದಿವಾಕರ್ ಡಿ.ಮಂಡ್ಯ
ಹೇ..ರಾಮ್ ನಿನ್ನ ಮಂತ್ರಾಕ್ಷತೆ
ದೇಶದ ಉದ್ದಗಲಕ್ಕೂ ಪ್ರಜೆಗಳ
ಮನೆ ಮನಕ್ಕೂ ತಲುಪಿಸುತಿಹರು
ನನ್ನ ಬಿನ್ನಹವಿದು ನೀ ಕೇಳು..!!
ಬಡತನದ ಬೇಗೆಯಲಿ ಬೆಂದು ನರಳಿ
ಹಗಲಿರುಳು ದುಡಿದು ಹಿಡಿ ಅನ್ನಕ್ಕೂ
ಮರುಗುವವರ ಹಸಿವಿಗೆ ಅಕ್ಷಯಪಾತ್ರೆ ಆಗಬಲ್ಲೆಯಾ?
ಮನೆ ಮನದಲ್ಲಿರುವ ಕೋಮು- ದ್ವೇಷ ಅಸೂಯೆಯ ಕೊಂದು ಒಂಚೂರು ಸಹನೆ – ಪ್ರೀತಿ ವಿಶ್ವಾಸವ ಚಿಗುರಿಸಬಲ್ಲೆಯಾ?
ನಾ ಹಿಂದೂ ನೀ ಮುಸ್ಲಿಂ ಇವ ಕ್ರೈಸ್ತ ಅವ ಮಗದೊಂದೆಂದು ವಿಭಜಿಸಿ
ಧರ್ಮ ದೇವರು ಜಾತಿಯೆಂದು
ಹಲುಬುತ್ತಿರುವವರಿಗೆ ನಾವೆಲ್ಲಾ
ಒಂದೇ ಎಂಬ ಮನುಜಪಥವ ತಿಳಿಸಬಲ್ಲೆಯಾ?
ತನ್ನ ದೇಹದ ರಕುತವ ಬಸಿದು ಬಿಸಿಲು ಚಳಿಯನ್ನು ಲೆಕ್ಕಿಸದೇ ದುಡಿದು ದೇಶಕ್ಕೆ ಅನ್ನವನ್ನಿಕ್ಕಿದ ರೈತರನ್ನು ಅವಮಾನಿಸಿದ ಅಜ್ಞಾನಿಗಳಿಗೆ ತಿಳಿವು ನೀಡಬಲ್ಲೆಯಾ?
ಆದರ್ಶಪುರುಷನೆಂಬ ಅವತಾರವೆತ್ತಿ ಹೊಗಳಿಸಿಕೊಳ್ಳುವ ನೀನು ನಿನ್ನ
ರಾಷ್ಟ್ರದ ಪತಾಕೆಯನ್ನು ವಿಶ್ವಕ್ಕೆ
ಸಾರಿದ ಮಹಿಳಾಮಣಿಗಳ ಮೇಲಾದ ದೌರ್ಜನ್ಯಕ್ಕೆ
ಶಿಕ್ಷೆ ನೀಡಬಲ್ಲೆಯಾ?
ಪ್ರತಿಕ್ಷಣವೂ ನಿನ್ನದೇ ನೆಲದಲ್ಲಿ ಉಳ್ಳವರ ಅಟ್ಟಹಾಸಕ್ಕೆ ಬಲಿಯಾಗುವ ದೀನ ದಲಿತರ ಮೇಲಿನ ದಬ್ಬಾಳಿಕೆಗೆ
ಅಂತ್ಯವ ಹಾಡಬಲ್ಲೆಯಾ?
ನಿನ್ನದೇ ದೇವಾಲಯದ ಪೂಜಾ ವಿಧಿ ವಿಧಾನಗಳಿಗೆ ವಿಧವೆಯೆಂದು ವಿರೋಧಿಸಿ ತಿರಸ್ಕರಿಸಿದವರಿಗೆ
ನಿನ್ನ ತಾಯಿಯು ಮಹಿಳೆಯೆಂದು ಮನವರಿಕೆ ಮಾಡಬಲ್ಲೆಯಾ?
ಅವನು ಮೇಲು ಇವನು ಕೀಳೆಂದು
ನಾ ದೊರೆ ನೀ ಸೇವಕನೆಂದು
ಅವಮಾನಿಸುವ ಅಧಮರ ಅಜ್ಞಾನವ ತೊಳೆಯಬಲ್ಲೆಯಾ?
ಹೇ…ರಾಮ್…ನಿನ್ನದೇ ಹೆಸರಿನಲ್ಲಿ ಕ್ಷಣಕ್ಷಣವೂ ದ್ಷೇಷಾಸೂಯೆಗಳಿಗೆ ಬಲಿಮಾಡಿ ದೇಶದ ಉದ್ದಾರಕರೆಂದು ಬಿಂಬಿಸುವರಿಗೆ ಇವೆಲ್ಲವೂ
ಚುನಾವಣಾ ಗಿಮಿಕ್ ಗಳೆಂದು
ಪ್ರಜೆಗಳಿಗೆ ತಿಳಿಸಬಲ್ಲೆಯಾ..??