ದಸಂಸ ಮುಖಂಡ ಎಂ.ಬಿ. ಶ್ರೀನಿವಾಸ್ ಕೇವಲ ದಲಿತ ಸಮುದಾಯದ ಜನರ ಪರವಾಗಿ ಹೋರಾಟ ಮಾಡುತ್ತಿರಲಿಲ್ಲ. ಸಮಾಜದಲ್ಲಿ ತುಳಿತಕ್ಕೊಳಗಾದವರ ಎಲ್ಲಾ ವರ್ಗದ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದು, ಅವರ ಸಮಾಜಮುಖಿ ಕಾರ್ಯಗಳನ್ನು ಅವರ ಪ್ರತಿಷ್ಠಾನ ಮುಂದುವರೆಸಿಕೊಂಡು ಹೋಗಲಿ ಎಂದು ಗ್ರಾಮ ಪಂಚಾಯತಿ ಸದಸ್ಯ ಕುಮಾರ್ ತಿಳಿಸಿದರು.
ಪಾಂಡವಪುರ ತಾಲೂಕಿನ ಮೇನಾಗರದಲ್ಲಿ ಎಂ.ಬಿ. ಶ್ರೀನಿವಾಸ್ ಪ್ರತಿಷ್ಠಾನ ಏರ್ಪಡಿಸಿದ್ದ ಹೋರಾಟಗಾರ ಎಂ.ಬಿ. ಶ್ರೀನಿವಾಸ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಪರ ಸದಾ ಸ್ಪಂದಿಸುತ್ತಿದ್ದ ಎಂ.ಬಿ.ಶ್ರೀನಿವಾಸ್ ಅವರ ಅಕಾಲಿಕ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಸಮಾಜದಲ್ಲಿ ನೊಂದವರ ಪರ ಸದಾ ಹೋರಾಟ ಮಾಡುತ್ತಿದ್ದ ಎಂ.ಬಿ. ಶ್ರೀನಿವಾಸ್ ಅವರ ಸಮಾಜಮುಖಿ ಕಾರ್ಯಗಳನ್ನು ಅವರ ಪ್ರತಿಷ್ಠಾನ ಮುಂದುವರಿಸಿಕೊಂಡು ಹೋಗಿ ನೊಂದವರಿಗೆ ನ್ಯಾಯ ಕೊಡಿಸಲಿ ಎಂದು ಸಲಹೆ ನೀಡಿದರು.
ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಸುಮಾರಾಣಿ, ದಸಂಸ ಮುಖಂಡ ಎಂ.ಬಿ. ಶ್ರೀನಿವಾಸ್ ಅವರು ಸಮಾಜಮುಖಿ ಹೋರಾಟಗಾರರಿಗೆ ಪ್ರೇರಕ ಶಕ್ತಿಯಾಗಿದ್ದವರು. ಯಾವುದೇ ಸಂದರ್ಭದಲ್ಲೂ ಮೇಲ್ಮಟ್ಟದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮುಂದೆ ಧೈರ್ಯದಿಂದ ಮುಂದೆ ನಿಂತು ಪ್ರಶ್ನೆ ಮಾಡುತ್ತಿದ್ದರು. ಅವರು ದಿಢೀರ್ ಎಂದು ಸಾವನ್ನಪ್ಪಿದ್ದು, ಹೋರಾಟಗಳಿಗೆ ಆದ ನಷ್ಟ ಎನ್ನಬಹುದು.
ದಲಿತ ಸಮುದಾಯ ಉನ್ನತ ಶಿಕ್ಷಣ ಪಡೆದು ವಿದ್ಯಾವಂತರಾದರೆ ಅವರ ಆಶಯ ಈಡೇರುತ್ತದೆ. ಅವರ ಪ್ರತಿಷ್ಠಾನ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂದು ತಿಳಿಸಿದರು.
ಸುಮಾರು 60 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಜಿ.ಪಂ.ಮಾಜಿ ಸದಸ್ಯ ಸಿ.ಅಶೋಕ್, ಕಾಂಗ್ರೆಸ್ ಮುಖಂಡ ಡಾ.ರವೀಂದ್ರ, ರೈತಸಂಘದ ವಿಜಯ್ ಕುಮಾರ್, ಎಂ.ಬಿ. ಶ್ರೀನಿವಾಸ್ ಅವರ ಪತ್ನಿ ಗ್ರಾಮ ಪಂಚಾಯತಿ ಸದಸ್ಯರಾದ ಶೋಭಾ ಶ್ರೀನಿವಾಸ್, ಮಕ್ಕಳಾದ ರಾಹುಲ್, ಪ್ರಿಯಾಂಕ, ದಸಂಸ ಮುಖಂಡರಾದ ಎಂ.ವಿ.ಕೃಷ್ಣ, ಸಾತನೂರು ಜಯರಾಂ,ನಾಗರಾಜಯ್ಯ ,ಪರಮೇಶ್,ಬೊಮ್ಮರಾಜು, ಹೇಮಂತ್,ಕೆನ್ನಾಳು ಮಹೇಶ್,ಚೆಸ್ಕಾಂ ಇಂಜಿನಿಯರ್ ಚೆಲುವರಾಜ್,ಪಿಡಿಓ ರಾಜೇಂದ್ರ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು