ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ ಎಂದು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರು ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ನ್ಯಾಯಾಧೀಶರು ಮತ್ತು ಪೊಲೀಸರು ಎಷ್ಟು ಒತ್ತಡದಲಿ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಪರಸ್ಪರ ಇಬ್ಬರಿಗೂ ಚೆನ್ನಾಗಿ ಗೊತ್ತಿದೆ. ಪೋಲಿಸರದ್ದು ದಿನದ 24 ಗಂಟೆಗಳ ಕರ್ತವ್ಯ.ಹಗಲಿರಲಿ, ರಾತ್ರಿಯಿರಲಿ ಕೆಲಸ ಮಾಡಬೇಕು ಹಬ್ಬ, ಹರಿದಿನ ಇದ್ದಾಗ ಅವರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯದೆ ಆರೋಪಿಯೊಬ್ಬನನ್ನು ನ್ಯಾಯಾಧೀಶರ ಮನೆಗೆ ಕರೆದು ಕೊಂಡು ಬಂದಿರುತ್ತಾರೆ.ನಾವು ಈ ರೀತಿ ಹಬ್ಬದ ದಿನವೂ ಆರೋಪಿಗಳನ್ನು ಕರೆದುಕೊಂಡು ಬರುತ್ತಾರಲ್ಲ ಎಂದರೆ ಬೇಸರವಾಗುತ್ತದೆ.
ಆದರೆ ನಮಗಿಂತ ಪೊಲೀಸರು ಆರೋಪಿಯನ್ನು ಜೈಲಿಗೆ ಬಿಡುವಷ್ಟರಲ್ಲಿ ಸಾಕಷ್ಟು ಸಮಯ ವ್ಯಯಿಸಬೇಕಾಗುತ್ತೆ. ಪೋಲಿಸರಿಗೆ ನಮಗಿಂತ ಹೆಚ್ಚು ಒತ್ತಡಗಳಿರುತ್ತವೆ. ಅಂತಹ ಸಂದರ್ಭವನ್ನು ಮರೆಯಲು ಕ್ರೀಡಾಕೂಟ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಮನುಷ್ಯನಲ್ಲಿ ಕ್ರೀಡಾ ಮನೋಭಾವ ಹುಟ್ಟಿಸುವ ಕ್ರೀಡೆಯಲ್ಲಿ ಎಲ್ಲರೂ ಭಾಗವಹಿಸಿ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಇನ್ನೊಬ್ಬರ ಗೆಲುವನ್ನು ನಮ್ಮ ಗೆಲುವು ಎಂದು ಸಂಭ್ರಮಿಸಬೇಕು ಎಂದು ಅವರು, ಪೊಲೀಸರು ಇಂದು ಮಾಡಿದ ಶಿಸ್ತು ನೋಡಿ ನನ್ನ ಮನಸ್ಸಿಗೆ ತುಂಬಾ ಸಂತೋಷ ಉಂಟಾಯಿತು ಎಂದರು.
ಜಿಲ್ಲಾಧಿಕಾರಿ ಡಾ. ಎಚ್. ಎನ್. ಗೋಪಾಲಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಣಾಧಿಕಾರಿ ಎನ್.ಯತೀಶ್,ಅಪರ ಪೊಲೀಸ್ ಅಧಿಕಾರಿ ಎಂ.ವೇಣುಗೋಪಾಲ್ ಸೇರಿದಂತೆ ಎಲ್ಲಾ ತಾಲೂಕುಗಳ ಪೊಲೀಸರು ಹಾಜರಿದ್ದರು.