ವರದಿ: ಪ್ರಭು ವಿ ಎಸ್
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾದರೂ ನಮಗೆ ಯಾವುದೇ ಚಿಂತೆಯಿಲ್ಲ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲ್ಲವುದು ಖಚಿತ ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ ತಾಲ್ಲೂಕಿನ ಕೆಸ್ತೂರು ಬಳಿಯ ಮಾಚಹಳ್ಳಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆಯನ್ನು ನೆರವೇರಿಸಿದ ನಂತರ ಅವರು ಮಾತನಾಡಿದರು.
ಸ್ಥಳೀಯರಿಗಿಂತ ಹೊರಗಡೆಯವರೇ ಅಂತಿಮವಾಗಿ ಅಭ್ಯರ್ಥಿಯಾಗುತ್ತಿರುವುದರಿಂದ ನಮ್ಮ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಸ್ಪರ್ಧೆ ಕಠಿಣವಾಗುವುದರ ಬದಲು ಸುಲಭವಾದಂತಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಬೆಂಗಳೂರು ದಕ್ಷಿಣದಲ್ಲಿ ಹೆಚ್.ಡಿ.ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರಿಗೆ ಜೆಡಿಎಸ್ ಪಕ್ಷವು ಬಿಜೆಪಿ ಟಿಕೆಟ್ ಕೊಡಿಸಿರುವುದು ಹಾಸ್ಯಸ್ಪದವಾಗಿದೆ, ಜೆಡಿಎಸ್ ಬಿಟ್ಟು ಬಿಜೆಪಿಯಿಂದ ಟಿಕೆಟ್ ಕೊಡಿಸಿರುವುದರಿಂದ ಅಲ್ಲಿ ಅವರ ಜೆಡಿಎಸ್ ಪಕ್ಷವು ವೀಕ್ ಆಗಿದೆ ಎಂದು ಅವರೇ ತಿಳಿಸಿದಂತಾಗಿದೆ ಅಲ್ಲವೇ ಎಂದು ವ್ಯಂಗ್ಯವಾಡಿದರು.
ಕೆಲವರಿಗೆ ವೈಯಕ್ತಿಕವಾಗಿ ಆರೋಗ್ಯದ ಸಮಸ್ಯೆಗಳಿರುತ್ತದೆ, ಆದರೆ ಅವುಗಳನ್ನು ಬಹಿರಂಗವಾಗಿ ಯಾರೂ ಹೇಳಿಕೊಳ್ಳುವುದಿಲ್ಲ. ಆದರೆ ಇವರು ತಮ್ಮ ಮಗನ ಪರವಾಗಿ ಜನರಲ್ಲಿ ಅನುಕಂಪಗಿಟ್ಟಿಸುವ ಸಲುವಾಗಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಕಿಡಿಕಾರಿರು.
ಈ ವೇಳೆ ಮುಖಂಡರಾದ ಆರ್.ಸಿ.ಎಸ್ ಶಿವು, ಯರಗನಹಳ್ಳಿ ಹರೀಶ್, ನಟರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.