ರೈತರ ಕಥಾ ಹಂದರ ಹಾಗೂ ಸಾಮಾಜಿಕ ಕಳಕಳಿಯುಳ್ಳ “ದಿಗ್ವಿಜಯ” ಚಲನಚಿತ್ರ ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ವಾರ ಮಂಡ್ಯದಲ್ಲಿ ಬಿಡುಗಡೆ ಆಗುತ್ತಿದೆ ಎಂದು ಚಿತ್ರದ ನಿರ್ದೇಶಕ ಪಿ.ಎಸ್.ದುರ್ಗ ತಿಳಿಸಿದರು.
ಗುರುವಾರ ಮಂಡ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಪಿ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ 65 ಲಕ್ಷ ರೂ. ವೆಚ್ಚದಲ್ಲಿ ದಿಗ್ವಿಜಯ ಸಿನಿಮಾ ಕಳೆದ ಶುಕ್ರವಾರ 56 ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಂಡು ಉತ್ತಮ ಗಳಿಕೆ ಮಾಡಿದ್ದು, ಈ ವಾರ ಮಂಡ್ಯ ನಗರದ ಜಯಲಕ್ಷ್ಮಿ ಚಿತ್ರಮಂದಿರ ಸೇರಿದಂತೆ ಹತ್ತಕ್ಕೂ ಅಧಿಕ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿದೆ ಎಂದರು.
ಈಗಾಗಲೇ ಹೇಳಿದಂತೆ ರೈತರ ಬದುಕು, ಬವಣೆ, ಕಷ್ಟವನ್ನೇ ಕಥಾ ಹಂದರ ಮಾಡಿಕೊಂಡು ಹಲವು ಮಂದಿ ರೈತರನ್ನು ದಿಗ್ವಿಜಯ ಸಿನಿಮಾದಲ್ಲಿ ನೈಜತೆಯಾಗಿ ಬಳಸಿಕೊಂಡು ಸಿನಿಮಾ ತಯಾರಿಸಲಾಗಿದೆ. ಮಂಡ್ಯ ತಾಲ್ಲೂಕಿನ ಮಲ್ಲಿಗೆರೆ, ಮಂಗಳೂರು, ಬೆಂಗಳೂರು ಸೇರಿದಂತೆ ಹಲವೆಡೆ ಸಿನಿಮಾ ಚಿತ್ರೀಕರಣವಾಗಿದೆ ಎಂದು ಹೇಳಿದರು.
ಸಿನಿಮಾದಲ್ಲಿ ತಲಾ ನಾಲ್ಕು ಹಾಡು, ಫೈಟ್ ಇದೆ ಎಂದ ಅವರು, ದಿಗ್ವಿಜಯ ಸಿನಿಮಾವನ್ನು ದುರ್ಗ ಹಾಗೂ ಶ್ರೀಕಾಂತ್ ಹೊನ್ನವಳ್ಳಿ ನಿರ್ದೇಶಿಸಿದ್ದು, ಜಯಪ್ರಭ ಲಿಂಗಾಯತ್, ಆರ್.ಸಿ.ಹರೀಶ್ ನಿರ್ಮಿಸಿದ್ದಾರೆ. ಹರ್ಷ ಕಾಗೋಡು ಸಂಗೀತವಿರುವ ಸಿನಿಮಾದಲ್ಲಿ, ವಿನಸ್ ಮೂರ್ತಿ ಅವರ ಛಾಯಾಗ್ರಹಣ ಇದೆ ಎಂದರು.
ಸಿನಿಮಾದಲ್ಲಿ ಜಯಪ್ರಭ ಲಿಂಗಾಯತ್ ನಾಯಕನಟನಾಗಿ ನಟಿಸಿದ್ದು, ಸ್ನೇಹಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಪೋಷಕ ನಟರಾಗಿ ಸುಚೇಂದ್ರ ಪ್ರಸಾದ್, ಹೊನ್ನವಳ್ಳಿ ಕೃಷ್ಣ, ಹೊನ್ನವಳ್ಳಿ ಶ್ರೀಕಾಂತ್, ಪಟ್ರೆ ನಾಗರಾಜ್, ಕಿಲ್ಲರ್ ವೆಂಕಟೇಶ್ ಇತರರು ನಟಿಸಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಚಿತ್ರತಂಡದ ರಾಹುಲ್, ಹೊನ್ನಾವಳ್ಳಿ ಶ್ರೀಕಾಂತ್, ಗೊರವಾಲೆ ಮಹೇಶ್ ಇತರರಿದ್ದರು.