“ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಅವೆಲ್ಲ ಊಹಾಪೋಹ” ಎಂದು ಹೇಳುವ ಮೂಲಕ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಜಿ ಟಿ ದೇವೇಗೌಡ ಅವರು ಮಾಧ್ಯಮಗಳ ಮುಂದೆ ಮುಜುಗರಕ್ಕೆ ಒಳಗಾದರು. ಅಷ್ಟೇ ಅಲ್ಲ ಮಾಧ್ಯಮಗಳ ತೀಕ್ಷ್ಣ ಪ್ರಶ್ನೆಗಳಿಗೆ ತಬ್ಬಿಬ್ಬಾದ ಪ್ರಸಂಗ ನಡೆಯಿತು.
ಭಾನುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿ ಟಿ ದೇವೇಗೌಡ, ಮಾಧ್ಯಮಗಳ ಪ್ರಶ್ನೆಗೆ ಆರಂಭದಲ್ಲಿ ಹಾರಿಕೆಯ ಉತ್ತರ ನೀಡಿದರು. ಚುನಾವಣೆಯ ಸಮಯದಲ್ಲಿ ಇಂತಹ ಷಡ್ಯಂತ್ರಗಳು ನಡೆಯುತ್ತವೆ. ಎದುರಾಳಿಯನ್ನು ಸೋಲಿಸಲು ಏನು ಬೇಕೋ ಅದನ್ನು ಮಾಡುತ್ತಾರೆ ಎಂದು ಹೇಳುತ್ತಾ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ನಂತರ “ತನಿಖಾ ಸಂಸ್ಥೆಗಳು, ಸಿಐಡಿ, ಎಸ್ಐಟಿ ಎಲ್ಲವೂ ನಿಮ್ಮ ಕೈಯಲ್ಲಿದೆ. ಯಾವ ತನಿಖೆ ನಡೆಸಿದರೂ ನಾವು ಸ್ವಾಗತ ಮಾಡುತ್ತೇವೆ” ಎಂದು ಸಮಜಾಯಿಷಿ ನೀಡಿದರು.
“ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ವಿಡಿಯೊ ಬಹಿರಂಗಗೊಂಡು ಸಾವಿರಾರು ಹೆಣ್ಣುಮಕ್ಕಳ ಮಾನಹಾನಿ ಆಗಿದೆ. ಅದರಲ್ಲಿ ಜೆಡಿಎಸ್, ಬಿಜೆಪಿ ಪಕ್ಷದ ಕಾರ್ಯಕರ್ತರೂ ಇದ್ದಾರೆ. ಒಕ್ಕಲಿಗ ಹೆಣ್ಣುಮಕ್ಕಳೂ ಇದ್ದಾರೆ ಅವರ ಮಾನಹಾನಿ ತಡೆಯುವ ಸಂಬಂಧ ನಿಮ್ಮ ಪಕ್ಷ ಯಾವ ಕ್ರಮ ಕೈಗೊಳ್ಳಲಿದೆ” ಎಂಬ ಪ್ರಶ್ನೆಗೆ, “ನಾವು ಪ್ರತಿಯೊಬ್ಬ ಹೆಣ್ಣುಮಕ್ಕಳನ್ನು ಗೌರವಿಸುತ್ತೇವೆ. ನಾನು ಕೋರ್ ಕಮಿಟಿ ಅಧ್ಯಕ್ಷನಾಗಿ ನನ್ನ ಇತಿಮಿತಿಯಲ್ಲಿ ಏನು ಮಾತಾಡಬಹುದೋ ಅಷ್ಟು ಮಾತನಾಡುತ್ತೇನೆ” ಎಂದರು.
ಪಕ್ಷದ ಸಂಸದನ ಬಗ್ಗೆ ಇಷ್ಟು ದೊಡ್ಡ ಆರೋಪ ಬಂದಿದ್ದರೂ ಪಕ್ಷದ ಕಡೆಯಿಂದ ಒಂದೇ ಒಂದು ಹೇಳಿ ಬಂದಿಲ್ಲವಲ್ಲ? ಉಚ್ಛಾಟನೆ ಮಾಡ್ತೀರಾ ಎಂಬ ಪ್ರಶ್ನೆಗೆ, ಪಕ್ಷದ ಸಭೆಯಲ್ಲಿ ಕೂತು ಚರ್ಚಿಸಿ ಶಿಸ್ತು ಕ್ರಮ ಜರುಗಿಸುವ ಬಗ್ಗೆ ತೀರ್ಮಾನಿಸುತ್ತೇವೆ. ನಮಗೂ ಒಂದು ಹೈಕಮಾಂಡ್ ಇದೆ ಎಂದರು.
ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಗೊತ್ತಿಲ್ಲ ಎಂದ ಜಿಟಿಡಿ ನಂತರ ಅವರು ಎಲ್ಲೂ ಹೋಗಿಲ್ಲ. ನಿನ್ನೆ ಭವಾನಿ ರೇವಣ್ಣ ಅವರ ಸಹೋದರನ ಸಾವಾಗಿತ್ತು. ಅಲ್ಲಿಗೂ ಬಂದು ಹೋಗಿದ್ದಾರೆ. ನಾವು ಮಂಡ್ಯದ ಮತದಾನ ಮುಗಿದ ನಂತರ ಹುಬ್ಬಳ್ಳಿಯ ಕಡೆ ಪ್ರಚಾರಕ್ಕೆ ಹೊರಟಿದ್ದೇವೆ. ಎಲ್ಲರನ್ನೂ ಕಾಯ್ಕೊಂಡು ಕೂರಲು ಸಾಧ್ಯವಿಲ್ಲ ಎಂದು ಹೇಳಿದರು.
“ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ನನ್ನ ಮಗನೇ ಮಾಡಿರಲಿ, ಅಣ್ಣ ತಮ್ಮಂದಿರೇ ಆಗಿರಲಿ ಪ್ರಕರಣ ಮುಚ್ಚಿ ಹಾಕಲು ಹೋಗಲ್ಲ” ಎಂದು ಹೇಳಿದರು.
ಹಾಸನದಲ್ಲಿ ಗೆಲ್ತೀರಾ ಎಂಬ ಪ್ರಶ್ನೆಗೆ ಮೊದಲ ಹಂತದ ಮತದಾನ ಆದ 14 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಟಿ ಎ ಶರವಣ ಇದ್ದರು.