ಮಂಡ್ಯ ಲೋಕಸಭಾ ಕ್ಷೇತ್ರದ ಎನ್’ಡಿಎ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರ ಪರವಾಗಿ ಮಂಡ್ಯ ಗ್ರಾಮಾಂತರ, ಗೋಪಾಲಪುರ, ಸಾತನೂರು, ಹನಕೆರೆ, ಬಿ.ಗೌಡಗೆರೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಬಿ.ಆರ್ ರಾಮಚಂದ್ರ, ಅಶೋಕ್ ಜಯರಾಮ್, ವಿಜಯಾನಂದ್ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಚುನಾವಣಾ ಪ್ರಚಾರ ನಡೆಸಿದರು.
ನಂತರ ಮಾತನಾಡಿದ ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್ ರಾಮಚಂದ್ರು, ಮಂಡ್ಯಕ್ಕೆ ಕುಮಾರಣ್ಣ, ಇಂಡಿಯಾಗೆ ಮೋದಿಜಿ ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ನಡೆಸಲಾಗುತ್ತಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಸಾಲ ಮನ್ನಾ, ನೀರಾವರಿ ಯೋಜನೆಗಳಿಗೆ ಅನುದಾನ, ಗ್ರಾಮೀಣ ಭಾಗದಲ್ಲಿ ಹೈಟೆಕ್ ಶಾಲೆಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಗಿರುವುದು ಮಂಡ್ಯ ಜನರಿಗೆ ಒಂದು ಸುವರ್ಣ ಅವಕಾಶ ಇಂತಹ ಅವಕಾಶವನ್ನು ಮಂಡ್ಯ ಜಿಲ್ಲೆಯ ಜನತೆ ಬಳಸಿಕೊಂಡು ಅವರನ್ನು ಪ್ರಚಂಡ ಬಹುಮತಗಳಿಂದ ಮಂಡ್ಯ ಲೋಕಸಭಾ ಸದಸ್ಯರಾಗಿ ಆಯ್ಕೆ ಮಾಡಿದರೆ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗುವ ಅವಕಾಶವಿದೆ ಎಂದು ಹೇಳಿದರು.
ಕುಮಾರಣ್ಣನವರ ಜನಪರ ಆಡಳಿತವನ್ನು ಮೆಚ್ಚಿ ಪಣಕನಹಳ್ಳಿ ಗ್ರಾಮದ ಗೋವಿಂದು, ನಾಗರಾಜು, ಪ್ರಸನ್ನ, ರಾಮಚಂದ್ರು, ರಘು, ನಿಂಗರಾಜು ಎಂ.ಜಿ ಬಡಾವಣೆಯ ಆನಂದ್ ಹಾಗೂ ಹೆಚ್. ಕೋಡಿಹಳ್ಳಿಯ ರಾಮಕೃಷ್ಣ ರವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಿ.ಆರ್ ರಾಮಚಂದ್ರ, ಅಶೋಕ್ ಜಯರಾಮ್, ಕೆ.ಎಸ್. ವಿಜಯಾನಂದ, ರಘುನಂದನ್, ಸಿದ್ಧರಾಮೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಬೂದನೂರು ಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಭೀಮೇಶ್, ಮಂಜು ಇತರರು ಹಾಜರಿದ್ದರು