ಪುರಸಭೆಗೆ ಅರ್ಜಿ ಸಲ್ಲಿಸಿದ್ದರೂ ಕೆಲಸ ಮಾಡದೇ ವಿಳಂಬ ಮಾಡುತ್ತಿರುವ ಪುರಸಭಾ ಅಧಿಕಾರಿಗಳು, ಈಗ ಮನೆಮನೆಗೆ ತೆರಳಿ ಖಾತೆ, ಇ ಸ್ವತ್ತು ಮಾಡಿಸಿಕೊಳ್ಳಿ ಎಂದು ಜನರಿಗೆ ಒತ್ತಾಯ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಾಲ್ಲೂಕು ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹೊಸಹೊಳಲು ಪುಟ್ಟರಾಜು ಪುರಸಭಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ಪುರಸಭಾ ಕಚೇರಿ ಮುಂಭಾಗದಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿ ,ಸಾರ್ವಜನಿಕರು ತಮ್ಮ ಕೆಲಸ ಮಾಡಿಕೊಡಿ ಎಂದು ಪುರಸಭೆ ಅರ್ಜಿ ಸಲ್ಲಿಸಿ ಹಣ ಪಾವತಿ ಮಾಡಿದ್ದರೂ ಕೆಲಸ ಮಾಡದೇ ಆರರಿಂದ ಎಂಟು ತಿಂಗಳು ಕಾಲ ವಿಳಂಬ ಮಾಡುತ್ತಿದ್ದು, ಇದರಿಂದ ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ಪುರಸಭೆಗೆ ಅಲೆಯುತ್ತಿದ್ದಾರೆ. ಆದರೂ ಪುರಸಭಾ ಅಧಿಕಾರಿಗಳು ಈಗ ಮನೆ ಮನೆಗೆ ತೆರಳಿ ಖಾತೆ, ಇ ಸ್ವತ್ತು ಮಾಡಿಸಿಕೊಳ್ಳಿ ಎಂದು ಜನರಿಗೆ ಒತ್ತಾಯ ಮಾಡುತ್ತಿರುವುದು ಹಾಸ್ಯಸ್ಪದವಾಗಿದೆ. ಮೊದಲು ಪುರಸಭೆಗೆ ಅರ್ಜಿಸಲ್ಲಿಸಿ ನಿಯಮಾನುಸಾರ ಹಣವನ್ನು ಪಾವತಿ ಮಾಡಿರುವವರಿಗೆ ಕೆಲಸ ಮಾಡಿ ಕೊಡಿ, ನಂತರ ನೀವು ರಸ್ತೆಯನ್ನು ತಿರುಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರು ತಿಂಗಳಾಗಿದೆ ಖಾತೆ ಮಾಡಿಕೊಟ್ಟಿಲ್ಲ
ಪುರಸಭಾ ವ್ಯಾಪ್ತಿಯಲ್ಲಿ ನಿವೇಶನ ಹೊಂದಿರುವ ಸಾಧುಗೋನಹಳ್ಳಿ ನಿವಾಸಿ ಸುದರ್ಶನ್ ಎಂಬುವವರು ಮಾತನಾಡಿ, ನಮ್ಮ ನಿವೇಶನದ ಖಾತೆ ಮತ್ತು ಇ-ಸ್ವತ್ತು ಮಾಡಿಕೊಡಿ ಎಂದು ಖುದ್ದು ಪುರಸಭೆಗೆ ಅರ್ಜಿ ಸಲ್ಲಿಸಿದ್ದರೂ ಖಾತೆ ಮಾಡದ ಪುರಸಭಾ ಅಧಿಕಾರಿಗಳು ದಿನಕ್ಕೊಂದು ಕಾರಣ ಹೇಳಿ ಅಲೆಸುತ್ತಿದ್ದಾರೆ. ಈ ನನ್ನ ಜೊತೆಯಲ್ಲಿಯೇ ಖಾತೆ ಮಾಡಲು ಅರ್ಜಿ ಹಾಕಿರುವ ಮಂಜುನಾಥ್, ಮಹೇಶ್ ಎಂಬುವವರು ಇದ್ದಾರೆ ಅವರೂ ಕೂಡಾ ಹಲವಾರು ತಿಂಗಳಿನಿಂದ ಪುರಸಭಾ ಕಚೇರಿಗೆ ಅಲೆಯುತ್ತಿದ್ದಾರೆ. ನಮ್ಮ ಕೆಲಸವನ್ನು ಮಾಡಕೊಡದ ಅಧಿಕಾರಿಗಳು ಮನೆ ಮನೆಗೆ ತೆರಳಿ ಖಾತೆ ಮಾಡಿಸಿಕೊಳ್ಳಿ ಎಂದು ಹೇಳುತ್ತಿರುವುದು ಕೇವಲ ಪ್ರಚಾರಕ್ಕಾಗಿಯೇ ಹೊರತು ಕೆಲಸವಂತೂ ಆಗಲ್ಲ. ತಕ್ಷಣ ಅರ್ಜಿಹಾಕಿರುವವರಿಗೆ ಕೆಲಸ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಮಯದಲ್ಲಿ ತಾಲೂಕು ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಎಸ್.ಶಿವಣ್ಣ, ದಲಿತ ಮುಖಂಡ ಸುರೇಶ್, ಮಹೇಶ್, ಮಂಜುನಾಥ್, ಗಂಗಾಧರ್ ಮತ್ತಿತರರು ಹಾಜರಿದ್ದರು.