ಲಿಂಗ ಸಂವೇದನೆಗೆ ಒಳಗೊಂಡಂತೆ ಚುನಾವಣಾ ರಾಜಕಾರಣ ಆರೋಗ್ಯಕರವಾಗಿರಬೇಕೆಂದು ರೈತ ನಾಯಕಿ ಸುನಂದ ಜಯರಾಂ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಆರೋಗ್ಯಕರ ಚರ್ಚೆ ನಡೆಯುತ್ತಿಲ್ಲ. ಲೋಕಸಭೆ ಚುನಾವಣೆಯ ಮಹತ್ವ, ಮೌಲ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯ ಹಕ್ಕುಗಳು ಮತ್ತು ಗಂಭೀರ ವಿಷಯಗಳ ಚರ್ಚೆ ಮಾಡದೆ ಮಹಿಳೆಯರನ್ನು ವಸ್ತುವನ್ನಾಗಿ ನೋಡುವ, ಬಳಸಿಕೊಳ್ಳುವ ಕೃತ್ಯ ಪಕ್ಷ ರಾಜಕಾರಣದಲ್ಲಿ ನಡೆಯುತ್ತಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಪಕ್ಷ ರಾಜಕಾರಣ ಸಭ್ಯತೆಯ ಎಲ್ಲೇ ಮೀರಿ ಪರಸ್ಪರ ನೈತಿಕತೆ, ಆಸ್ತಿ ಪಾಸ್ತಿ ಮತ್ತು ಇಲ್ಲಸಲ್ಲದ ಆರೋಪಗಳ ಮಾಡುತ್ತಾ ಅನಾವಶ್ಯಕವಾಗಿ ವ್ಯಕ್ತಿ ನಿಂದನೆಯ ಪದ ಪ್ರಯೋಗ ಮಾಡಿ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಮಹಿಳೆಯರನ್ನು ಉದಾಹರಿಸಿ, ಹೋಲಿಕೆ ಮಾಡಿ ಮಾತನಾಡುವ ಮೂಲಕ ವ್ಯಕ್ತಿಗತ ಘನತೆಗೆ ದಕ್ಕೆ ತರುತ್ತಿರುವುದು, ಸಮುದಾಯಗಳ ನೆಮ್ಮದಿ ಕಲಕುವ ಕೆಲಸಗಳ ಬಗ್ಗೆ ನಾಗರಿಕ ಸಮಾಜ ಎಚ್ಚರಿಸಬೇಕಾಗಿದೆ. ಅದೇ ರೀತಿ ಚುನಾವಣಾ ಆಯೋಗ ಕೂಡ ಇಂತಹ ಅನಾರೋಗ್ಯಕರ ರಾಜಕಾರಣಕ್ಕೆ ಕಡಿವಾಣ ಹಾಕಲು ಮುಂದಾಗಬೇಕಾಗಿದೆ ಎಂದಿದ್ದಾರೆ.
ಆರೋಗ್ಯಕರ ಸಮಾಜಕ್ಕೆ ಲಿಂಗ ಸಂವೇದನೆ ಮುಖ್ಯ, ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂಬುದನ್ನು ಅರಿಯಬೇಕಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಚರ್ಚೆ ಅತ್ಯವಶ್ಯಕ, ಟೀಕೆ ಇರಲಿ, ಆದರೆ ರಾಜಕಾರಣಿಗಳ ನಡೆ – ನುಡಿ ಮಾದರಿಯಾಗಿರಬೇಕು ಹೊರತು ಸಾರ್ವಜನಿಕ ಚರ್ಚೆಗೆ ಆಹಾರವಾಗಬಾರದು. ಮಳೆ ಇಲ್ಲದೆ ನೀರಿನ ಹಾಹಾಕಾರ ಎದುರಾಗಿ ಬೆಳೆಗಳೆಲ್ಲ ಒಣಗಿದ್ದು, ಕುಡಿಯುವ ನೀರಿನ ಅಭಾವ ಉಂಟಾಗಿದೆ. ಇಂತಹ ಗಂಭೀರ ವಿಷಯಗಳು ಚರ್ಚೆಯಾಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.