ವೈಜ್ಞಾನಿಕವಾಗಿ ವಿಚಾರ ಮಾಡಿದಾಗ ಅಂಧಶ್ರಧ್ದೆಗಳು ದೂರವಾಗುತ್ತವೆ. ವಿಜ್ಞಾನ ಮೇಳಗಳಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಬಹಳ ಹಣವಿದ್ದರೆ ನೆಮ್ಮದಿ ಇರುತ್ತದೆ ಎಂದು ಹಲವರು ಭಾವಿಸಿದ್ದಾರೆ. ನೆಮ್ಮದಿ ನಮ್ಮೊಳಗೆ ಇದೆ. ಅದನ್ನು ಪಡೆಯಲು ಶ್ರೀಮಂತಿಕೆ ಬೇಕಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅಭಿಪ್ರಾಯಪಟ್ಟರು.
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿ.ಜಿ.ಎಸ್ ಸಭಾ ಭವನದಲ್ಲಿ ಶ್ರೀಗಳ ಪಟ್ಟಾಭಿಷೇಕ ದಶಮಾನೋತ್ಸವ ಕಾರ್ಯಕ್ರಮದಲ್ಲಿ ವಿಜ್ಞಾತಂ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಆದಿಚುಂಚನಗಿರಿ ಮಠದ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಪವಾಡ ಮಾಡಿದ್ಧಾರೆ, ಹಾಗೆಯೇ ತಮ್ಮ ಉತ್ತರಾಧಿಕಾರಿಯಾಗಿ ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಆಯ್ಕೆ ಮಾಡುವ ಮೂಲಕ ಮತ್ತೊಂದು ಪವಾಡ ಮಾಡಿದ್ದಾರೆ ಎಂದು ತಿಳಿಸಿದರು.
ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, 2047ರೊಳಗೆ ಭಾರತ ವಿಶ್ವದ ಅರ್ಥ ವ್ಯವಸ್ಥೆಯ ಮೊದಲ ಸ್ಥಾನದಲ್ಲಿ ನಿಲ್ಲುವುದರ ಜೊತೆಗೆ ಭಾರತ ವಿಶ್ವಗುರುವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಜ್ಞಾನ ಮತ್ತು ವಿಜ್ಞಾನದಿಂದ ಇಂದು ಭಾರತ ವಿಶ್ವಗುರುವಾಗಲು ಹೊರಟಿದೆ, ವಿಶ್ವದಲ್ಲಿಯೇ ಭಾರತ ಇಂದು ಸ್ಟಾರ್ಟ್ ಅಪ್ ಗಳಲ್ಲಿಯೇ ಮೊದಲ ಸ್ಥಾನದಲ್ಲಿದೆ. ನಾವು ವಿಜ್ಞಾನಿಗಳಾಗುತ್ತಿದ್ದರೂ ಮನಸ್ಸಿನ ವಿಕಾರದಿಂದ ಅದು ದುರ್ಬಳಕೆಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಕೆ ಸುರೇಶ್ ಗೌಡ, ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು