ಬೆಂಗಳೂರಿನ ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ರಾಶಿ ಎಂಬ ವಿದ್ಯಾರ್ಥಿನಿಯ ಕೊಲೆ ಪ್ರಕರಣದಲ್ಲಿ ನೊಂದ ಕುಟುಂಬಕ್ಕೆ ಸರ್ಕಾರವು 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ ಎಂದು ಅಖಿಲ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾದ ಸಂಚಾಲಕ ತ್ರಿಭುವನ್ ಹೇಳಿದರು.
ಮಂಡ್ಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ.ವ್ಯಾಸಂಗ ಮಾಡುತ್ತಿದ್ದ ಕು.ರಾಶಿ ಎಂಬ ವಿದ್ಯಾರ್ಥಿನಿಯನ್ನು ಕಳೆದ ಜ.19, 2022ರಂದು ಮಧುಚಂದ್ರ ಎಂಬ ಹಣ್ಣಿನ ವ್ಯಾಪಾರಿಯೂ ಮದುವೆಯಾಗುವಂತೆ ಪೀಡಿಸಿ, ಕೊಲೆ ಮಾಡಿದ್ದ. ಈ ಘಟನೆಯಲ್ಲಿ ನೊಂದ ಕುಟುಂಕ್ಕೆ ಪರಿಹಾರ ನೀಡುವಂತೆ ಅಖಿಲ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ವಿದ್ಯಾರ್ಥಿ ಯುವಮೋರ್ಚದ ರಾಜ್ಯಾಧ್ಯಕ್ಷ ಬಿ.ಪಿ.ಜೀವನ್ ಮತ್ತು ರಾಜ್ಯ ಪದಾಧಿಕಾರಿಗಳು ನಿಯೋಗದೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ₹ 5 ಲಕ್ಷಗಳ ಪರಿಹಾರವನ್ನು ಘೋಷಿಸಿದೆ ಎಂದು ತಿಳಿಸಿದರು.
ಕೊಲೆಯಾದ ವಿದ್ಯಾರ್ಥಿನಿ ರಾಶಿ ಅವರ ತಾಯಿ ಸುಶೀಲಮ್ಮ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.5.ಲಕ್ಷಗಳ ಪರಿಹಾರ ನಿಧಿಯನ್ನು (ಚೆಕ್ ನಂ. ಎಂ.573416) ಜ.27, 2023ರಲ್ಲಿ ಬಿಡುಗಡೆ ಮಾಡಲಾಗಿದ್ದು, ಯಲಹಂಕ ತಹಶೀಲ್ದಾರ್ ಅವರು ಚೆಕ್ ಅನ್ನು ಸುಶೀಲಮ್ಮ ಅವರಿಗೆ ಹಸ್ತಾಂತರಿಸುವರು ಎಂದರು.
ಗೋಷ್ಠಿಯಲ್ಲಿ ವಿದ್ಯಾರ್ಥಿ ಮುಖಂಡರಾದ ಶಿವಪ್ರಕಾಶ್, ಮಹೇಶ್ವರಿ, ನಮಿತಾ, ಕೀರ್ತನಾ, ಐಶ್ವರ್ಯ ಮತ್ತಿತರರು ಉಪಸ್ಥಿತರಿದ್ದರು.