ಕಳೆದ 10 ವರ್ಷಗಳ ಕಾಲ ದೇಶದಲ್ಲಿ ರೈತರ, ಬಡವರ, ಮಹಿಳೆಯರು ಹಾಗೂ ಶೋಷಿತರ ವಿರುದ್ದವಾಗಿ ಆಡಳಿತ ನಡೆಸಿದ ಮೋದಿ ಸರ್ಕಾರವು ದೇಶದಲ್ಲಿ ಮತ್ತೇ ಅಧಿಕಾರಕ್ಕೆ ಬಂದರೆ ನಮ್ಮ ದೇಶದ ಸಂವಿಧಾನ ಬದಲಾವಣೆಯಾಗುವುದರ ಜೊತೆ ನಾಗರೀಕ ಹಕ್ಕುಗಳು ಮೊಟಕುಗೊಳ್ಳುತ್ತವೆ ಎಂದು ಗಾಂಧಿವಾದಿ ಸುದೀಂದ್ರ ಕುಲಕರ್ಣಿ ಆತಂಕ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೊರಿನಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣದವರೆಗೆ ವಚನ ಸಂವಿಧಾನ ಉಳಿಸೋಣ, ಬಹುತ್ವ ಸಮಾಜ ಕಟ್ಟೋಣ ಎಂಬ ಘೋಷಣೆಯಡಿ ವಚನ ಸಂವಿಧಾನ ಪ್ರಣಾಳಿಕೆ ಜಾಥಾ ಹಮ್ಮಿಕೊಂಡಿರುವ ಅವರು, ಭಾನುವಾರ ಸಂಜೆ ಮಂಡ್ಯನಗರವನ್ನು ತಲುಪಿ, ಹೊಸಹಳ್ಳಿ ಸರ್ಕಲ್ ನಲ್ಲಿ ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಾನು ಬಿಜೆಪಿಯ ಅಗ್ರಗಣ್ಯ ನಾಯಕರಾಗಿ ವಾಜಪೇಯಿ, ಅಡ್ವಾಣಿಯವರ ಜೊತೆ ಇದ್ದುಕೊಂಡು ಸುಮಾರು 27 ವರ್ಷ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಆದರೆ ಅಂದಿನ ಬಿಜೆಪಿಗೂ ಇಂದಿನ ಬಿಜೆಪಿಗೆ ದೊಡ್ಡ ವ್ಯತ್ಯಾಸವಿದೆ. ಮೋದಿ ಆಡಳಿತವು ನಿರಂಕುಶವಾಗಿ ಸರ್ವಾಧಿಕಾರದತ್ತ ಹೊರಳುತ್ತಿದೆ. ಹಾಗಾಗಿ ಈ ಭಾರಿಯ ಲೋಕಸಭಾ ಚುನಾವಣೆಯ ದೇಶದ ಜನತೆಗೆ ಪ್ರಮುಖವಾದ್ದು, ಆದ್ದರಿಂದ ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಸಂವಿಧಾನ ವಿರೋಧಿಗಳನ್ನು ಸೋಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾನ ಮನಸ್ಕರ ವೇದಿಕೆಯ ರಾಜ್ಯ ಸಂಚಾಲಕ ಜಗನ್, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ಪ್ರೊ ಹುಲ್ಕರೆ ಮಹದೇವು, ನಿವೃತ್ತ ಪ್ರಾಂಶುಪಾಲಚಂದ್ರಶೇಖರ್, ಕರುನಾಡು ಸೇವಕರು ಸಂಘಟನೆಯ ಎಂ. ಬಿ. ನಾಗಣ್ಣಗೌಡ, ಟಿ ಡಿ ನಾಗರಾಜು, ಮುಕುಂದ, ಮಹಮದ್ ತಾಹೇರ್, ಹುರುಗಲವಾಡಿ ರಾಮಯ್ಯ, ಮಂಜುಳ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.