ಆ ಕುಟುಂಬಕ್ಕೆ ಆಧಾರವಾಗಿದ್ದ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದ.ಮಗನನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬ ದಿಕ್ಕು ತೋಚದೆ ಕಂಗಾಲಾಗಿತ್ತು.ಇಂತಹ ಸಂಕಷ್ಟದ ಸಂದರ್ಭದಲ್ಲಿ ಮೃತ ಯುವಕನ ಕುಟುಂಬದ ನೆರವಿಗೆ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಬಂದಿದೆ.
ಮೃತ ಯುವಕ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 750 ರೂ. ಅಪಘಾತ ವಿಮೆ ಕಟ್ಟಿದ್ದ.ಈಗ ಬ್ಯಾಂಕ್ ಮೃತ ಯುವಕನ ಕುಟುಂಬಕ್ಕೆ 20 ಲಕ್ಷ ರೂ.ಗಳ ಪರಿಹಾರ ನೀಡಿದೆ. ಈ ವಿಮೆ ಯೋಜನೆಯಡಿ ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡಿರುವುದು ದೇಶದಲ್ಲಿಯೇ ಮೊದಲ ಪ್ರಕರಣವೆಂದು ಬ್ಯಾಂಕ್ನ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಮಾಚಲಪ್ಪ ಮತ್ತು ಮಹದೇವಮ್ಮ ಎಂಬುವರ ಮಗ ಅವಿನಾಶ್(30) ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ.ದುಡಿಯುತ್ತಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಈ ನಡುವೆ ಅಪಘಾತ ವಿಮೆ ನೆರವಿಗೆ ಬಂದಿದ್ದು, ಪರಿಹಾರದ ಹಣ ಕುಟುಂಬದ ಕೈ ಸೇರಿದೆ.
ಅವಿನಾಶ್ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಕೀಲಾರ ಶಾಖೆಯಲ್ಲಿ ಅಪಘಾತ ವಿಮೆ ಕಟ್ಟಿದ್ದರು. ಅದರಂತೆ ವಾರ್ಷಿಕ 750 ರೂ. ಮೊದಲ ಕಂತನ್ನು ಪಾವತಿಸಿದ್ದರು. ಈ ಹಿನ್ನೆಲೆಯಲ್ಲಿ ವಿಮೆ ಯೋಜನೆಯಂತೆ ನೊಂದ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ.
ಮಂಗಳವಾರ ಕೀಲಾರ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಇಂಡಿಯನ್ ಓವರಸೀಸ್ ಬ್ಯಾಂಕ್ ಮೈಸೂರು ಡಿವಿಷನ್ ಮ್ಯಾನೇಜರ್ ವಿಕಾಶ್ವರ್ಮಾ, ಅಧಿಕಾರಿ ಮೀನಾಕ್ಷಿ, ಕೀಲಾರ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ಜಯಕೃಷ್ಣ, ಸಹಾಯಕ ವ್ಯವಸ್ಥಾಪಕ ಮಹಾವೀರ್ಸಿಂಗ್ ಅವರು ಮೃತ ಅವಿನಾಶ್ ತಾಯಿ ಮಹದೇವಮ್ಮ ಅವರಿಗೆ 20 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಣೆ ಮಾಡಿದರು.