ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಪರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಮಂಡ್ಯ ನಗರದ ಕಲ್ಲಹಳ್ಳಿ ಬಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಅಶೋಕ್ ಜಯರಾಮ್ ಹಾಗೂ ಬಿಜೆಪಿ ಕಾರ್ಯಕರ್ತರು ಭಾರೀ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಬರಮಾಡಿಕೊಂಡರು.
ನಂತರ 100 ಅಡಿ ರಸ್ತೆಗೆ ತಲುಪಿದ ಸಿಎಂ ಬಸವರಾಜ್ ಬೊಮ್ಮಾಯಿ ರೋಡ್ ಶೋ ಮೂಲಕ ಅಶೋಕ್ ಜಯರಾಮ್ ಪರ ಮತಯಾಚಿಸಿದರು.
ರೋಡ್ ಶೋದಲ್ಲಿ ವಿವಿಧ ಕಲಾ ಪ್ರಾಕಾರಗಳಾದ ಗಾರುಡಿಗೊಂಬೆ,ಕಂಸಾಳೆ, ಪಟ ಕುಣಿತ, ನಗಾರಿ, ಡೊಳ್ಳು ಕುಣಿತ,ಕೋಲಾಟ ಸೇರಿದಂತೆ ವಿವಿಧ ಜಾನಪದ ತಂಡಗಳು ಭಾಗವಹಿಸಿದ್ದವು.
100 ಅಡಿ ರಸ್ತೆಯ ಮೂಲಕ ಹೊಸಹಳ್ಳಿ ವೃತ್ತ, ವಿವಿ ರಸ್ತೆ ಮೂಲಕ ಮಹಾವೀರ ವೃತ್ತದಲ್ಲಿ ರೋಡ್ ಶೋ ಅಂತ್ಯಗೊಂಡಿತು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಶೋಕ್ ಜಯರಾಮ್ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕೊಟ್ಟರೆ ಮಂಡ್ಯದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಅಶೋಕ್ ಜಯರಾಮ್ ಮಾತನಾಡಿ, ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ನಾನು ಪಣ ತೊಟ್ಟಿದ್ದು, ನನಗೊಂದು ಅವಕಾಶ ನೀಡುವ ಮೂಲಕ ನಿಮ್ಮಗಳ ಸೇವೆಗೆ ಅನುವು ಮಾಡಿಕೊಡಬೇಕೆಂದು ಮತದಾರರಲ್ಲಿ ಕೋರಿದರು. ಬಿಜೆಪಿ ಮುಖಂಡರಾದ ನೆ.ಲ.ನರೇಂದ್ರಬಾಬು,ಡಿ.ಎಸ್.ವೀರಯ್ಯ, ತಾರಾ ಅನುರಾಧ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್,ಸಿದ್ದರಾಮಯ್ಯ,ಬೇಲೂರು ಸೋಮಶೇಖರ್ ಮತ್ತಿತರರು ಭಾಗವಹಿಸಿದ್ದರು.