ಎರಡು ಬೊಲೆರೋ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಮದ್ದೂರು ತಾಲೂಕಿನ ಈಡಿಗರದೊಡ್ಡಿಯ ( ಮದ್ದೂರು- ತುಮಕೂರು ರಸ್ತೆ) ಹೆದ್ದಾರಿಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯವಾಗಿರುವ ಘಟನೆ ಸೋಮವಾರ ಮುಂಜಾನೆ 5.30 ರ ಸಮಯದಲ್ಲಿ ನಡೆದಿದೆ.
ಎಳನೀರು ತುಂಬಿಕೊಂಡು ಹೋಗುತ್ತಿದ್ದ ಬೊಲೆರೋ ವಾಹನದ ಚಾಲಕ ಚನ್ನಪಟ್ಟಣ ತಾಲೂಕಿನ ಮಳೂರು ಪಟ್ಟಣದ ನಿವಾಸಿ ದಿಲೀಪ್ (35) ಮೃತ ವ್ಯಕ್ತಿ. ತುಮಕೂರು ಕಡೆಯಿಂದ ದ್ರಾಕ್ಷಿ ತುಂಬಿಕೊಂಡು ಬರುತ್ತಿದ್ದ ಬೊಲೆರೊ ವಾಹನ ಹಾಗೂ ಮದ್ದೂರು ಕಡೆಯಿಂದ ಎಳನೀರು ತುಂಬಿಕೊಂಡು ಹೋಗುತ್ತಿದ್ದ ಬೊಲೆರೊ ವಾಹನಗಳ ನಡುವೆ ಮುಖಾಮುಖಿ ಸಂಭವಿಸಿದೆ.
ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು ಹಾಗೂ ದ್ರಾಕ್ಷಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತು. ಸ್ಥಳಕ್ಕೆ ಕೆಸ್ತೂರು ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.