Sunday, May 5, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮುಕ್ತ- ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸಜ್ಜು: ಡಾ.ಕುಮಾರ

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಯಂತೆ 17,79,243 ಮತದಾರರಿದ್ದು, ಲೋಕಸಭಾ ಕ್ಷೇತ್ರದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಇಡೀ ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಳವಳ್ಳಿಯಲ್ಲಿ ಗಂಡು-126118 ಹೆಣ್ಣು-127487, ತೃತೀಯ ಲಿಂಗಿಗಳು-23, ಒಟ್ಟು 253628 ಮತದಾರರಿದ್ದಾರೆ.

ಮದ್ದೂರಿನಲ್ಲಿ ಗಂಡು-104280, ಹೆಣ್ಣು-111443, ತೃತೀಯ ಲಿಂಗಿಗಳು-22, ಒಟ್ಟು 215745 ಮತದಾರರಿದ್ದಾರೆ.

ಮೇಲುಕೋಟೆಯಲ್ಲಿ ಗಂಡು-100379, ಹೆಣ್ಣು-103010, ತೃತೀಯ ಲಿಂಗಿಗಳು-9, ಒಟ್ಟು 203398 ಮತದಾರರಿದ್ದಾರೆ.

ಮಂಡ್ಯದಲ್ಲಿ ಗಂಡು-111868, ಹೆಣ್ಣು-117759, ತೃತೀಯ ಲಿಂಗಿಗಳು- 36, ಒಟ್ಟು 229663 ಮತದಾರರಿದ್ದಾರೆ.

ಶ್ರೀರಂಗಪಟ್ಟಣ ಗಂಡು-106157, ಹೆಣ್ಣು-111431, ತೃತೀಯ ಲಿಂಗಿಗಳು- 44, ಒಟ್ಟು 217632 ಮತದಾರರಿದ್ದಾರೆ.

ನಾಗಮಂಗಲದಲ್ಲಿ ಗಂಡು-107760, ಹೆಣ್ಣು-108783, ತೃತೀಯ ಲಿಂಗಿಗಳು- 11, ಒಟ್ಟು 216554 ಮತದಾರರಿದ್ದಾರೆ.

ಕೃಷ್ಣರಾಜಪೇಟೆಯಲ್ಲಿ ಗಂಡು-111542 ಹೆಣ್ಣು-112284 ತೃತೀಯ ಲಿಂಗಿಗಳು- 11, ಒಟ್ಟು 223837 ಮತದಾರರಿದ್ದಾರೆ.

ಕೆ. ಆರ್ ನಗರದಲ್ಲಿ ಗಂಡು-108008, ಹೆಣ್ಣು-110766, ತೃತೀಯ ಲಿಂಗಿಗಳು- 12, ಒಟ್ಟು 218786 ಮತದಾರರಿದ್ದಾರೆ ಎಂದು ವಿವರಿಸಿದರು.

2076 ಮತಗಟ್ಟೆಗಳು

ಮತದಾನಕ್ಕಾಗಿ 2076 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಮಳವಳ್ಳಿ- 272, ಮದ್ದೂರು-254, ಮೇಲುಕೋಟೆ-264, ಮಂಡ್ಯ-264, ಶ್ರೀರಂಗಪಟ್ಟಣ-249, ನಾಗಮಂಗಲ-260, ಕೃಷ್ಣರಾಜಪೇಟೆ-261, ಕೆ. ಆರ್ ನಗರ-252 ಮತಗಟ್ಟೆಗಳಿವೆ ಎಂದರು.

1120 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್

ಮಳವಳ್ಳಿ – 137, ಮದ್ದೂರು – 127, ಮೇಲುಕೋಟೆ – 192, ಮಂಡ್ಯ – 131, ಶ್ರೀರಂಗಪಟ್ಟಣ – 125, ನಾಗಮಂಗಲ – 150, ಕೃಷ್ಣರಾಜಪೇಟೆ – 132, ಕೆ. ಆರ್. ನಗರ – 126, ಒಟ್ಟು – 1120 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅನ್ನು ಅಳವಡಿಸಲಾಗುವುದು ಎಂದರು.

ಮತದಾನವು ಏಪ್ರಿಲ್ 26 ರಂದು ನಡೆಯಲಿದ್ದು, ಸ್ಥಳೀಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರು, ಕಾರ್ಯಕರ್ತರು, ಸ್ಟಾರ್ ಕ್ಯಾಂಪೇನರ್ಸ್ಗಳು, ಮೆರವಣಿಗೆ ಆಯೋಜಕರು ಸೇರಿದಂತೆ ಮತ್ತಿತರರು ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಈಗಾಗಲೇ ಸಂಬಂಧಪಟ್ಟ ಸಹಾಯ ಚುನಾವಣಾ ಅಧಿಕಾರಿಗಳಿಗೆ ಮತ್ತು ಆಯಾ ತಹಶಿಲ್ದಾರ್ ರವರಿಗೆ ಸೂಚನೆ ನೀಡಲಾಗಿದೆ ಎಂದರು.

ಮತದಾನದ ಕೊನೆಯ 48 ಗಂಟೆ ಅವಧಿಗೆ ಒಬ್ಬ ಅಭ್ಯರ್ಥಿಗೆ ಮೂರು ವಾಹನಗಳು ಮಾತ್ರ ಬಳಕೆಗೆ ಅವಕಾಶವಿರುತ್ತದೆ. ಅಭ್ಯರ್ಥಿಯ ಅನುಪಸ್ಥಿತಿಯಲ್ಲಿ ಅಭ್ಯರ್ಥಿಗೆ ನೀಡಿದ ವಾಹನವನ್ನು ಇತರರು ಉಪಯೋಗಿಸುವಂತಿಲ್ಲ. ಅನುಮತಿಸಿದ ವಾಹನಗಳಲ್ಲಿ ಐದು ಜನಕ್ಕಿಂತ ಹೆಚ್ಚು ಜನರು ಪ್ರಯಾಣಿಸತಕ್ಕದ್ದಲ್ಲ. ಈ ಅವಧಿಯಲ್ಲಿ 5 ಜನಕ್ಕಿಂತ ಹೆಚ್ಚಿನ ಜನ ಸೇರದಂತೆ ಸಿ.ಆರ್. ಪಿ.ಸಿ ಕಲಂ 144 ರಡಿ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದರು.

ಮೊಬೈಲ್ ಬಳಕೆ ನಿಷೇಧ

ಮತಗಟ್ಟೆಯ 100 ಮೀಟರ್ ಅಂತರದೊಳಗೆ ಮೊಬೈಲ್ ಬಳಕೆ ನಿಷೇಧವಿದೆ ಹಾಗೂ ಎಲ್ಲಾ ರೀತಿಯ ಪ್ರಚಾರ ನಿರ್ಬಂಧಿಸಿದೆ. ಮತಗಟ್ಟೆಯಿಂದ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಟೆಂಟ್ ಗಳನ್ನು ತೆರೆಯುವಂತಿಲ್ಲ ಹಾಗೂ ಮತಗಟ್ಟೆಯ 200 ಮೀ. ನಿಂದ ಹೊರಗೆ ತಾತ್ಕಾಲಿಕ ಬೂತ್ ತೆರೆಯಲು ಬಯಸಿದ್ದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ಹಾಗೂ ಸಂಬಂಧಪಟ್ಟ ಸಹಾಯಕ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಈ ಟೆಂಟ್ ನಲ್ಲಿ ಕೇವಲ ಇಬ್ಬರು ಕಾರ್ಯಕರ್ತರಿಗೆ ಸಾಕಾಗುವಷ್ಟು ಟಾರ್ಪಲಿನ್ ಅಥವಾ ಛತ್ರಿ ಮೇಲ್ಚಾವಣಿ ಹೊಂದಬಹುದಾಗಿದ್ದು, 2 ಕುರ್ಚಿ ಮತ್ತು ಮೇಜು ಹೊಂದಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ರಾಜಕೀಯ ಅಭ್ಯರ್ಥಿಗಳು ಮತದಾನದ ಅಂತ್ಯದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ. ಧ್ವನಿ ವರ್ಧಕಗಳ ಬಳಕೆ ಮಾಡಲು ಅವಕಾಶವಿಲ್ಲ ಆದರೆ ಮನೆಮನೆ ಭೇಟಿಗೆ ಅವಕಾಶವಿರುತ್ತದೆ.

ರಿಲೀಫ್ ಏಜೆಂಟ್ ನೇಮಕ

ಪ್ರತಿ ಮತಗಟ್ಟೆಗೆ ಒಬ್ಬ ಪೋಲಿಂಗ್ ಏಜೆಂಟ್ ಅನ್ನು ಹಾಗೂ ಇಬ್ಬರು ರಿಲೀಫ್ ಏಜೆಂಟ್ ಅನ್ನು ನೇಮಕ ಮಾಡಲು ಅವಕಾಶವಿರುತ್ತದೆ. ಇವರುಗಳು ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ ಆಸೀನರಾಗತಕ್ಕದ್ದು. ಮತಗಟ್ಟೆಯಲ್ಲಿ ಜನಪ್ರತಿನಿಧಿ ಕಾಯ್ದೆ ಕಲಂ 128 ರಲ್ಲಿ ನಿರ್ದಿಷ್ಟಪಡಿಸಿದಂತೆ ಮತದಾನದ ಗೌಪ್ಯತೆಯನ್ನು ಕಾಪಾಡತಕ್ಕದ್ದು ಎಂದು ತಿಳಿಸಿದರು.

ಮೀಡಿಯಾ ಸರ್ಟಿಫಿಕೇಷನ್ ಮತ್ತು ಮಾನಿಟರಿಂಗ್ ಸೆಲ್ ಮತದಾನಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸಬೇಕಾದರೆ ಸಂಬಂಧ ಪಟ್ಟ ಅಭ್ಯರ್ಥಿಗಳು ಅಥವಾ ಪಕ್ಷವು ಮಾಧ್ಯಮ ಪ್ರಮಾನಣೀಕರಣ ಸಮಿತಿ ವತಿಯಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಚುನಾವಣೋತ್ತರ ಸಮೀಕ್ಷೆ ಹಾಗೂ ಸಮೀಕ್ಷೆ ಫಲಿತಾಂಶವನ್ನು ಪ್ರಚಾರಪಡಿಸಲು ಅವಕಾಶವಿರುವುದಿಲ್ಲ ಎಂದರು.

ಅಭ್ಯರ್ಥಿ ಪರವಾಗಿ ಯಾವುದೇ ವ್ಯಕ್ತಿ ಅಥವಾ ಪಕ್ಷ ಚುನಾವಣಾ ಸಂಬಂಧ ಯಾವುದೇ ರೀತಿಯ ಪ್ರಚಾರ/ಭಿತ್ತಿಪತ್ರ/ ಜಾಹಿರಾತುಗಳನ್ನು ಸಂಬಂಧಪಟ್ಟ ಮಾಧ್ಯಮ ಪ್ರಮಾಣೀಕರಣ ಸಮಿತಿಯ ಗಮನಕ್ಕೆಬಾರದಂತೆ ಪ್ರಚಾರ ಮಾಡಿದಲ್ಲಿ ಉಲ್ಲಂಘನೆ ಕ್ರಮವೆಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ ಪ್ರಕರಣ 171ಹೆಚ್ ರಂತೆ ಮುದ್ರಣಗೊಳಿಸಿದ ಮುದ್ರಕರ ಮತ್ತು ಪ್ರಕಾಶಕರ ವಿರುದ್ಧ ದಂಡನಾರ್ಹ ಕ್ರಮವಹಿಸಲಾಗುವುದು.

ಅಭ್ಯರ್ಥಿಯ ಪರವಾಗಿ ಮುದ್ರಿಸಲಾದ ಕರಪತ್ರ, ಭಿತ್ತಿಪತ್ರ, ಪೋಸ್ಟರ್ ಮತ್ತು ಇತರೆ ದಾಖಲಾತಿಗಳಲ್ಲಿ ಮುದ್ರಕರ ಹೆಸರು ಮತ್ತು ವಿಳಾಸವನ್ನು ಕಡ್ಡಾಯವಾಗಿ ಮುದ್ರಿಸುವುದು. ಪ್ರಕಾಶಕರು ಹಾಗೂ ಮುದ್ರಾಕರ ಹೆಸರುಗಳನ್ನೂ ನಮೂದಿಸದಿದ್ದಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕರಣ 127ಎ ರಂತೆ ಕ್ರಮವಹಿಸಲಾಗುವುದು ಎಂದರು.

ಅಭ್ಯರ್ಥಿಯು ಪ್ರಚಾರ ಸಾಮಗ್ರಿಗಳ ಮತ್ತು ಪ್ರತಿದಿನದ ವೆಚ್ಚದ ವಿವರಗಳನ್ನು ನಿಗಧಿತ ಅನುಬಂಧ 12ರಲ್ಲಿ ಸೂಚಿಸಿರುವಂತೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತೆರೆಯಲಾಗಿರುವ ಚುನಾವಣಾ ವೆಚ್ಚ ವೀಕ್ಷಕರ ಕಛೇರಿಗೆ ಸಲ್ಲಿಸತಕ್ಕದ್ದು ಎಂದು ತಿಳಿಸಿದರು.

ಪೂರ್ವ ಪ್ರಮಾಣೀಕರಣ ಅನುಮತಿ

ಚುನಾವಣಾ ಆಯೋಗದ ನಿರ್ದೇಶನದಂತೆ ಮುದ್ರಣ ಮಾಧ್ಯಮದಲ್ಲಿ ಯಾವುದೇ ಪ್ರಚೋದಕ, ತಪ್ಪು ದಾರಿಗೆಳೆಯುವ ಅಥವಾ ದ್ವೇಷದ ಜಾಹೀರಾತುಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಚಿತಪಡಿಸಿಕೊಳ್ಳಲು, ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಯಾವುದೇ ಇತರ ಸಂಸ್ಥೆಗಳು ಅಥವಾ ವ್ಯಕ್ತಿಗಳು ರಾಜಕೀಯ ಜಾಹೀರಾತುಗಳನ್ನು ಮತದಾನದ ದಿನ ಹಾಗೂ ಮತದಾನದ ಮುನ್ನ ದಿನದಂದ (ಏಪ್ರಿಲ್ 25 ಹಾಗೂ ಏಪ್ರಿಲ್ 26) ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವ-ಪ್ರಮಾಣೀಕರಣ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.

ವಿಕಲಚೇತನರು ಹಾಗೂ ಹಿರಿಯ ನಾಗರಿಕ ಮತದಾರರಿಗೆ ಅನುಕೂಲಕರ ವ್ಯವಸ್ಥೆ

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ ವಿಕಲಚೇತನ ಹಾಗೂ ಹಿರಿಯ ನಾಗರೀಕ ಮತದಾರರಿಗೆ ಸುಗಮವಾಗಿ ಮತದಾನ ಮಾಡಲು ಪ್ರತಿ ಮತಗಟ್ಟೆಗೆ ಇಳಿಜಾರು ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ ಮಾಡಲಾಗಿರುತ್ತದೆ. ದೃಷ್ಟಿ ದೋಷವುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಅವಶ್ಯಕ ವಾಗುವಂತೆ ಬ್ರೈಲ್ ಲಿಪಿಯುಳ್ಳ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆ ಹಾಗೂ ಡಮ್ಮಿ ಬ್ರೈನ್ ಬ್ಯಾಲೆಟ್ ಪೇಪರ್ ವ್ಯವಸ್ಥೆ, ಶ್ರವಣದೋಷವುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಅವಶ್ಯಕವಿದ್ದಲ್ಲಿ ಸಂಜ್ಞಾ ಭಾಷೆ ತಜ್ಞರಿಂದ ಸಂಜ್ಞಾ ಭಾಷೆ (Signed Language) ಮೂಲಕ ಅವಶ್ಯಕ ಕಲ್ಪಿಸಲಾಗಿದೆ. ಮಂದದೃಷ್ಟಿಯುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಮತಗಟ್ಟೆ ಕೇಂದ್ರಗಳಲ್ಲಿ ಬೂತಕನ್ನಡಿ ವ್ಯವಸ್ಥೆ ಹಾಗೂ ವಿಕಲಚೇತನರು, ಅಶಕ್ತರಿಗೆ ಮತ್ತು ಹಿರಿಯ ನಾಗರಿಕರಿಗೆ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಮಂಡ್ಯ ಲೋಕಸಭಾ ವ್ಯಾಪ್ತಿಯ ಮತದಾರರಾಗಿದ್ದು, ಬೇರೆ ಜಿಲ್ಲೆ/ ಬೇರೆ ಕಡೆ ಕರ್ತವ್ಯ ನಿರ್ವಹಿಸುವಂತಹ ಅಧಿಕಾರಿ/ ನೌಕರರಿಗೆ ಅಂಚೆ ಮತ ಪತ್ರದ ವ್ಯವಸ್ಥೆಯನ್ನು ಚುನಾವಣಾ ಆಯೋಗವು ಕಲ್ಪಿಸಿರುತ್ತದೆ ಎಂದರು.

ಮತದಾನ ದಿವಸದಂದು ವೇತನ ಸಹಿತ ರಜೆ

ಏಪ್ರಿಲ್ 26 ರಂದು ಮತದಾನ ನಡೆಯಲಿದ್ದು, ಮತದಾನ ದಿನದಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕಾ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ – 1951 ರ ಕಲಂ 135 (ಬಿ ) ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲಾಗುವುದು ಎಂದರು.

ಮಾದರಿ ನೀತಿ ಜಾರಿಯಾದ ಮಾರ್ಚ್ 16 ರಿಂದ ಏಪ್ರಿಲ್ 23 ರವರೆಗೆ ರೂ. 1,06,08,990/- ನಗದು, ರೂ.1,50,27,871.39/- ಮೌಲ್ಯದ ಮದ್ಯ, ರೂ. 2,17,040 ಮೌಲ್ಯದ ಡ್ರಗ್ಸ್ ಹಾಗೂ ರೂ. 40,000 ಮೌಲ್ಯದ 2000 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಪ್ರಜಾಪ್ರಭುತ್ವದ ಮತದಾನ ಹಬ್ಬಕ್ಕೆ ಆಮಂತ್ರಣ

ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಏಪ್ರಿಲ್ 26 ರಂದು ಪ್ರತಿ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಪ್ರಜಾಪ್ರಭುತ್ವದ ಮತದಾನ ಹಬ್ಬಕ್ಕೆ ಆಮಂತ್ರಣ ಎಂಬ ಆಹ್ವಾನ ಪ್ರತಿಗಳನ್ನು ಮುದ್ರಿಸಿ ಪ್ರತಿ ಕುಟುಂಬಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1822 ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಲು 2099 ಪಿಆರ್ ಒ ಗಳು, 2099 ಎ ಪಿ ಆರ್ ಒ ಗಳು, 4198 ಪಿಒಗಳು, ಒಟ್ಟು 8396 ಸಿಬ್ಬಂದಿಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದು.

ಶುಷ್ಕ ದಿನ ಘೋಷಣೆ

ಚುನಾವಣೆಯ ಮತದಾನವು ಏಪ್ರಿಲ್ 26 ರಂದು ಹಾಗೂ ಮತ ಎಣಿಕೆಯ ಕಾರ್ಯವು ಜೂನ್ 4 ರಂದು ನಡೆಯಲಿದೆ. ಮತದಾನದ ಸಮಯದಲ್ಲಿ ಹಾಗೂ ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತದಾನದ ದಿನದಂದು ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮತದಾನ ಮತ್ತು ಮತ ಎಣಿಕೆ ದಿನದಂದು ಶುಷ್ಕ ದಿನವೆಂದು ಘೋಷಿಸಲಾಗಿದ್ದು, ಮಂಡ್ಯ ಜಿಲ್ಲೆಯಾದ್ಯಂತ ಏಪ್ರಿಲ್ 24 ರ ಸಂಜೆ 6 ಗಂಟೆಯಿಂದ ಏಪ್ರಿಲ್ 27 ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಮಂಡ್ಯ ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದಲ್ಲಿ ಜೂನ್ 4 ರಂದು ಮತ ಎಣಿಕೆ ಕಾರ್ಯವು ನಡೆಯುವ ಹಿನ್ನೆಲೆ ಮಂಡ್ಯ ನಗರ ವ್ಯಾಪ್ತಿ ಹಾಗೂ ನಗರದ ವ್ಯಾಪ್ತಿಯಿಂದ 5 ಕಿ. ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಜೂನ್ 3 ರಂದು ಸಂಜೆ 6 ಗಂಟೆಯಿಂದ ಜೂನ್ 5 ರ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್/ ಕ್ಲಬ್‌ಗಳನ್ನು ಮುಚ್ಚುವಂತೆ ಹಾಗೂ ಸದರಿ ಅವಧಿಯಲ್ಲಿ ಮದ್ಯ ತಯಾರಿಕ ಘಟಕಗಳು, ಮದ್ಯ ಮಾರಾಟ, ಹಂಚಿಕೆ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಶುಷ್ಕ ದಿನಗಳೆಂದು ಆದೇಶ ಹೊರಡಿಸಲಾಗಿದೆ ಎಂದರು.

ಸಂತೆ ಜಾತ್ರೆ ನಿಷೇಧ

ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಮತದಾನಕ್ಕೆ ಅವಕಾಶ ಕಲ್ಪಿಸುವ ಹಾಗೂ ಮತದಾನ ಕಾರ್ಯವನ್ನು ಸುಗಮವಾಗಿ ನಡೆಸುವ ಸಲುವಾಗಿ ಏಪ್ರಿಲ್ 26 ರಂದು ಮಂಡ್ಯ ಜಿಲ್ಲೆಯಾದ್ಯಂತ ನಡೆಯುವ ಎಲ್ಲಾ ರೀತಿಯ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ನಿಷೇಧಿಸಲಾಗಿದೆ ಎಂದರು.

ಮತದಾನ ಸಿಬ್ಬಂದಿಗಳಿಗೆ ಊಟೋಪಚಾರದ ವ್ಯವಸ್ಥೆ

ಜಿಲ್ಲೆಯ 1874 ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮತದಾನ ಸಿಬ್ಬಂದಿಗಳಿಗೆ ಏಪ್ರಿಲ್ 25 ರ ರಾತ್ರಿ ಮತ್ತು ಏಪ್ರಿಲ್ 26ರ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಎಸ್ ನಿರ್ಮಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!