ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ನೀಡಿರುವುದರ ಹಿಂದೆ ಬಿಜೆಪಿಯ ಹುಚ್ಚುತನವಿದೆ, ಅವರು ಭಯಭೀತರಾಗಿದ್ದು, ರಾಜ್ಯದಲ್ಲಿ ಸೋಲಿನಭೀತಿಗೆ ಸಿಲುಕಿದ್ದಾರೆ ಎಂದು ಎಐಸಿಸಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತ ಜೋಡೋ ಪಾದಯಾತ್ರೆಯ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಕಾನೂನು ಸಚಿವರು ನಾವು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿಲ್ಲ ಕೇವಲ ಸಮಯ ತಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಈ 40% ಕಮಿಷನ್ ಸರ್ಕಾರದ ವಿಚಾರ ಅವರದೇ ಸಚಿವರುಗಳಿಂದ ತಿಳಿಯುತ್ತಿದೆ. ಅವರು ನಮ್ಮ ಯಾತ್ರೆ ತಡೆಯಲು ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಅವರ ಈ ಬೆದರಿಕೆಗೆ ಡಿ.ಕೆ. ಶಿವಕುಮಾರ್ ಆಗಲಿ, ಡಿ.ಕೆ. ಸುರೇಶ್ ಅವರಗಲಿ, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಆಗಲಿ ಕಾರ್ಯಕರ್ತರಾಗಲಿ ಹೆದರುವುದಿಲ್ಲ. ಅವರ ಈ ಧೋರಣೆಗೆ ನಾವು ಜನತಾ ನ್ಯಾಯಾಲಯದಲ್ಲಿ ತಕ್ಕ ಉತ್ತರ ನೀಡುತ್ತೇವೆ. ಭಾರತ ಐಕ್ಯತಾ ಯಾತ್ರೆಗೆ ಜನ ಬೆಂಬಲ ಕಂಡು ವಿಚಲಿತರಾಗಿ ಬಿಜೆಪಿಯವರು ಈ ದುಸ್ಸಾಹಸಕ್ಕೆ ಮುಂದಾಗಿದ್ದಾರೆ ಎಂದು ತಿರುಗೇಟು ನೀಡಿದರು.
ದೇಶದ ಪ್ರಧಾನಿಯ ಸ್ನೇಹಿತ ಉದ್ಯಮಿಯ ಆಸ್ತಿ ಪ್ರತಿ ನಿತ್ಯ ಸಾವಿರ ಕೋಟಿಯಷ್ಟು ಹೆಚ್ಚುತ್ತಿರುವಾಗ ದೇಶದ ಶೇ.84 ರಷ್ಟು ಕುಟುಂಬಗಳ ಆದಾಯ ಕುಸಿಯುತ್ತಿದೆ. ಈ ಪರಿಸ್ಥಿತಿಯಲ್ಲಿ ಜನ ಬದುಕು ಕಟ್ಟಿಕೊಳ್ಳುವುದು ಹೇಗೆ? ಹೀಗಾಗಿ ರಾಹುಲ್ ಗಾಂಧಿ ಅವರು ಬೆಲೆ ಏರಿಕೆ, ನಿರುದ್ಯೋಗ, ದ್ವೇಷದ ಮೂಲಕ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ಮಣ್ಣುಪಾಲು ಮಾಡಲಾಗುತ್ತಿದೆ’ ಎಂದರು.
ಬಿಜೆಪಿಯ ಸುಳ್ಳು ಜಾಹೀರಾತು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ‘ಬಿಜೆಪಿಯವರು ಈ ಪಾದಯಾತ್ರೆಯಿಂದ ಹೆದರಿದ್ದಾರೆ. ರಾಜ್ಯದಲ್ಲಿ ಚುನಾವಣೆ ಆಗಮಿಸುತ್ತಿದ್ದು, ಅವರಿಗೆ ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆ. ಹೀಗಾಗಿ ನಡುಕ ಹುಟ್ಟಿದ್ದು, ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯವಿಲ್ಲ. ಹೀಗಾಗಿ ಈ ಜಾಹೀರಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ತಿಳಿಸಿದರು.
ಇದೇ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ಯಾವುದೇ ಸರ್ಕಾರ ಜನರಿಗಾಗಿ ಏನು ಮಾಡಿದೆ, ಯಾವ ಅಭಿವೃದ್ಧಿ ಮಾಡಿದೆ? ಯಾವ ನ್ಯಾಯ ನೀಡಿದೆ ಎಂದು ಮುಖ್ಯವಾಗುತ್ತದೆ. ಬಿಜೆಪಿ ಸರ್ಕಾರಕ್ಕೆ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೇಳಿಕೊಳ್ಳಲು ಸಾಧ್ಯವಾಗದೇ ಬೇಸತ್ತು ಕಾಂಗ್ರೆಸ್ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದೆ’ ಎಂದು ತಿಳಿಸಿದರು.