ಜೆಡಿಎಸ್ ಪಕ್ಷವು ಘೋಷಣೆ ಮಾಡಿರುವ ಪಂಚರತ್ನಯಾತ್ರೆಯಲ್ಲಿ ಹೊಸದೇನು ಇಲ್ಲ, ಈಗಾಗಲೇ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನೇ ಬೇರೆ ಹೆಸರಿನಲ್ಲಿ ಘೋಷಣೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಅಶೋಕ್ ಜಯರಾಂ ಟೀಕಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮಾಡುತ್ತಿರುವ ಯಾತ್ರೆ ಮತದಾರರಿಗೆ ಮಂಕುಬೂದಿ ಎರಚುವ ಯಾತ್ರೆಯಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಜನಪರ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿ, ಅಧಿಕಾರದ ಗದ್ದುಗೆ ಏರಿದ ಮೇಲೆ, ಕೊಟ್ಟ ಭರವಸೆಗಳನ್ನು ಈಡೇರಿಸಿದರೆ ಎಂಬುದನ್ನು ಕುಮಾರಸ್ವಾಮಿಯವರೇ ತಿಳಿಸಬೇಕು ಎಂದರು.
ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ, ಮೇಲುಕೋಟೆ, ಶ್ರೀರಂಗಪಟ್ಟಣ ಅಭಿವೃದ್ಧಿಯೂ ಸೇರಿದಂತೆ 40 ರಿಂದ 50 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಕೆ, 1300 ಕೋಟಿ ರೂ.ವೆಚ್ಚ ಮಾಡಿ ಶಾಶ್ವತ ಕುಡಿಯುವ ನೀರು ಯೋಜನೆಗೆ ಅನುಮತಿ ಕೊಟ್ಟಿದ್ದೇವೆ ಎಂದಿದ್ದೀರಿ ಅವು ಈಡೇರಿವೇಯೇ ? ಎಂದರು.
ಜಿಲ್ಲೆಯ ಕ್ರೀಡಾಂಗಣ ಅಭಿವದ್ಧಿಗೆ 2 ಕೋಟಿ ರೂ., ಮಳವಳ್ಳಿ ತಾಲೂಕಿನ ಹಲಗೂರು ಸುತ್ತಮುತ್ತ ನೀರಾವರಿ ಯೋಜನೆ ಕಾಮಗಾರಿಗಾಗಿ 600 ಕೋಟಿ ರೂ. ವೆಚ್ಚದಲ್ಲಿ ಯೋಜನೆ, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗಾಗಿ ಸುಮಾರು 1600 ಕೋಟಿ ರೂ, ಸಾತನೂರು ಫಾರ್ಮ್ ನಲ್ಲಿ 450 ಕೋಟಿ ರೂ.ವೆಚ್ಚದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದೀರಿ ಅವುಗಳ ಕಥೆ ಯಾನಾಯ್ತು ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಅಶೋಕ್ ಜಯರಾಂ, ಶಿವಕುಮಾರ್, ಸುರೇಶ್, ವಿನೋಬ ಉಪಸ್ಥಿತರಿದ್ದರು.