ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಇಡೀ ದೇಶದ ಜನತೆಗೆ ತಲುಪಬೇಕೆಂದರೆ ಕಾಂಗ್ರೆಸ್ ಗೆ ಮತನೀಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ, ರೈತರ ಸಾಲಮನ್ನಾ ಮಾಡಲಾಗುವುದು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.
ನಾಗಮಂಗಲ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ನಟ ದರ್ಶನ್ ಜೊತೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ರೈತ ಪರ ಸರ್ಕಾರಕ್ಕಾಗಿ, ದೇಶದ ಹಿತಕ್ಕಾಗಿ ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ರೈತ ಸಂಘ ಮತ್ತು ಸರ್ವೋದಯ ಪಕ್ಷ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದು ಮತದಾರರು ಕೂಡ ನನಗೆ ಆಶೀರ್ವದಿಸಬೇಕೆಂದು ಕೇಳಿದರು.
ನಾನು ಇದೇ ಜಿಲ್ಲೆಯ ರೈತನ ಮಗ. ನನ್ನ ಗೆಲುವು ರೈತರ ಗೆಲುವು. ಈ ಜಿಲ್ಲೆಯ ಸ್ವಾಭಿಮಾನದ ಗೆಲುವು. ಸಂಸತ್ ನಲ್ಲಿ ರೈತರ ದನಿಯಾಗಿ ಕೆಲಸ ಮಾಡುತ್ತೇನೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ನಾಗಮಂಗಲ ಅಭಿವೃದ್ಧಿ
ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ಇನ್ನೆರಡು ವರ್ಷ ವಿಶೇಷ ಅನುದಾನ ತಂದು ನಾಗಮಂಗಲ ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ವರ್ಗದ ಜನತೆಯ ಕಲ್ಯಾಣಕ್ಕೆ ಬದ್ಧನಾಗಿದ್ದು ತಾವು ಸ್ಟಾರ್ ಚಂದ್ರು ಅವರನ್ನು ಅತಿಹೆಚ್ಚು ಲೀಡ್ ಕೊಟ್ಟು ಗೆಲ್ಲಿಸಬೇಕು ಎಂದರು.
ಕುಟುಂಬದ ಹಿತಕ್ಕಾಗಿ ಮೈತ್ರಿ
ಡಾ. ಮುಖ್ಯಮಂತ್ರಿ ಚಂದ್ರು ಮಾತನಾಡಿ, ಪ್ರತಿಸ್ಪರ್ಧಿ ಅಭ್ಯರ್ಥಿ ಹೇಳ್ತಾರೆ, ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿತಪ್ಪಿದ್ದಾರೆ ಅಂತ. ಆದರೆ ದಾರಿ ತಪ್ಪಿರೋದು ಅವರ ಇಡೀ ಕುಟುಂಬ. ಅವರ ಬಿಜೆಪಿ ಜೊತೆ ಮಾಡಿಕೊಂಡಿರುವ ಮೈತ್ರಿ ಜನಹಿತಕ್ಕಾಗಿ ಅಲ್ಲ ಕುಟುಂಬದ ಹಿತಕ್ಕಾಗಿ ಎಂದು ಟೀಕಿಸಿದರು.