ರಂಗಭೂಮಿ ಕಲೆಗಳ ಉಳಿವಿಗೆ ಯುವ ಸಮುದಾಯ ಸಂಕಲ್ಪ ಮಾಡಬೇಕಿದೆ ಎಂದು ಹರಿಕಥೆ ವಿದ್ವಾನ್ ಶಿವಾರ ಉಮೇಶ್ ಹೇಳಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಲ್ ಟ್ರಸ್ಟ್ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ನಡೆದ ರಾಜ್ಯಮಟ್ಟದ ರಂಗಗೀತೆಗಳ ಸ್ಪರ್ಧೆ ಮತ್ತು ಕಲಾಸಾಧಕರಿಗೆ ಅಭಿನಂದನೆ-ವಿಜೇತೆರಿಗೆ ನಗದು ಬಹುಮಾನ ವಿತರಣೆ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದು ಮತ್ತು ಪ್ರಮಾಣತ್ರಗಳನ್ನು ನೀಡಿ ಗೌರವಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ರಂಗಭೂಮಿ ಕಲೆ ಮರೆಯಾಗುತ್ತಿದೆ, ಉಳಿಸಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ, ಸರ್ಕಾರ ಉದಾಸೀನ ಮಾಡಿದರೆ ಮುಂದಿನ ಪೀಳಿಗೆಗೆ ರಂಗಭೂಮಿ ಇಲ್ಲವಾಗುತ್ತದೆ ಎಂದು ಎಚ್ಚರಿಸಿದರು.
ಹಳ್ಳಿಗಾಡಿನಲ್ಲಿ ರಂಗಕುಣಿತ, ರಂಗಮಂಟಪಗಳು ಇದ್ದವು, ಇಲ್ಲಿ ಎಲ್ಲರೂ ಭಾವೈಕ್ಯತೆಯಿಂದ ರಂಗಕಲೆಗಳನ್ನು ಕಲಿತು ಪ್ರದರ್ಶನ ನೀಡಿ ಮನರಂಜನೆ ಸಮರ್ಪಿಸುತ್ತಿದ್ದರು, ಎಲ್ಲರೂ ಒಗ್ಗೂಡಿಸುವಿಕೆಯನ್ನು ರಂಗಮಂಟಪಗಳು ಕಟ್ಟಿಕೊಡುತ್ತಿದ್ದವು, ಬಡವ, ಬಲಿದ, ವರ್ಗ ತಾರತಮ್ಯವಿಲ್ಲದೆ ಎಲ್ಲರೂ ಬೆರೆಯುತ್ತಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರಂಗಗೀತೆ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು, ವಿಜೇತರಾದ ಪಾಂಡವಪುರ ಕುಳ್ಳೇಗೌಡ ಪ್ರಥಮ ಬಹುಮಾನವಾಗಿ 5 ಸಾವಿರ ರೂ., ಮಹದೇವಮ್ಮ ದ್ವಿತೀಯ ಬಹುಮಾನವಾಗಿ 3 ಸಾವಿರ ರೂ, ತೃತಿಯ ಬಹುಮಾನ ವಿಜೇತರಿಗೆ 2 ಸಾವಿರ ರೂ., ಸಮಾಧಾನಕರ ಬಹುಮಾನವಾಗಿ 4 ಮಂದಿಗೆ ತಲಾ 500 ರೂ.ಗಳನ್ನು ನೀಡಿ ಗೌರವಿಸಲಾಯಿತು. ರಂಗಭೂಮಿ ಕ್ಷೇತ್ರಗಳಲ್ಲಿನ ಕಲಾಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಂಜಮ್ಮಮೋಟೇಗೌಡ ಚಾರಿಟಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ. ಹನುಮಂತು, ಪ್ರತಿಭಾಂಜಲಿ ಪ್ರೊ. ಡೇವಿಡ್, ಜನಪರ ಲಯನ್ಸ್ ಸಂಸ್ಥೆ ಅಧ್ಯಕ್ಷೆ ರತ್ನಮ್ಮ, ಕೃಷಿಕ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಹೊನ್ನೇಗೌಡ, ರಮೇಶ್, ಕುಮಾರ್, ವೀರಪ್ಪ, ರಂಗಭೂಮಿ ನಿರ್ದೇಶಕ ಸುರೇಶ್ ಕಾರಸವಾಡಿ, ಕಲಾವಿದ ಕೆಂಚೇಗೌಡ ಮತ್ತಿತರರಿದ್ದರು.