ಛತ್ರಪತಿ ಸಾಹು ಮಹರಾಜ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ಪರಿವರ್ತನೆಗೆ ಹೊಸ ಬುನಾದಿ ಹಾಕಿದವರು ಎಂದು ಬೆಂಗಳೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಅಧೀಕ್ಷಕ ಅಭಿಯಂತರ ಚಂದ್ರಹಾಸ್ ಸ್ಮರಿಸಿದರು.
ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಎಸ್ಸಿ,ಎಸ್ಟಿ ನೌಕರರ ಸಂಘದ ಆವರಣದಲ್ಲಿ ಎಸ್ಸಿ, ಎಸ್ಟಿ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ, ನೆಲದನಿ ಬಳಗ ಮಂಗಲ, ವರ್ಧಮಾನ್ ಜೈನ್ ನೇತ್ರಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಛತ್ರಪತಿ ಸಾಹೂ ಮಹರಾಜ್ 139ನೇ ಜಯಂತಿ ಪ್ರಯುಕ್ತ ಉಚಿತ ಕಣ್ಣಿನ ಪೊರೆ ತಪಾಸಣಾ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ ಐಓಎಲ್ ಅಳವಡಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿಯೇ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಛತ್ರಪತಿ ಸಾಹು ಮಹರಾಜ್ ಅವರು ತಮ್ಮ ಆಡಳಿತಾಧಿಯಲ್ಲಿ ಸಾಕಷ್ಟು ಅನಿಷ್ಠ ಪದ್ಧತಿಗಳನ್ನು ದೂಡಿ, ಹೊಸ ಕಾನೂನುಗಳನ್ನು ಜನರಿಗೆ ಸಮರ್ಪಿಸುತ್ತಾರೆ, ಕೊಲ್ಲಾಪುರದ ಆಡಳಿತ ಸುವ್ಯವಸ್ಥೆಯನ್ನು ಗಮನಿಸಿದ ಮೈಸೂರು ರಾಜಮನೆತನದ ಒಡೆಯರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂತಹದ್ದೇ ಆಡಳಿತ ಯೋಜನೆಗಳನ್ನು ಜಾರಿ ಮಾಡುತ್ತಾರೆ ಎಂದು ನುಡಿದರು.
ಕೊಲ್ಲಾಪುರದಲ್ಲಿ ಸಾಹೂ ಮಹರಾಜ್ ಅವರು ಶೇ.50ರಷ್ಟು ಮೀಸಲಾತಿ ನೀಡಿ ಶೋಷಿತ ಸಮುದಾಯಗಳ ಅಭಿವೃದ್ದಿಗೆ ಮುಂದಾರೆ, ಮೈಸೂರು ಪ್ರಾಂತ್ಯದಲ್ಲಿ ಶೇ.75ರಷ್ಟು ಮೀಸಲಾತಿ ಜಾರಿ ಮಾಡಿ ಹೊಸ ಕ್ರಾಂತಿಯನ್ನೇ ಆರಂಭಿಸಿದ ಕೀರ್ತಿ ಒಡೆಯರ್ಗೆ ಸಲುತ್ತದೆ ಎಂದು ಸ್ಮರಿಸಿದರು.
ಮಂಡ್ಯ ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ.ಮಾದೇಶ್, ಮನುಷ್ಯನಿಗೆ ಕಣ್ಣು ಬಹಳ ಮುಖ್ಯ ಅಂಗವಾಗಿದೆ, ಹುಟ್ಟಿನಿಂದ ಕೊನೆವರೆಗೂ ಕಣ್ಣಿನ ಆರೋಗ್ಯ ನೋಡಿಕೊಳ್ಳುವುದು ಉತ್ತಮ, ಉದಾಸೀನ ಮಾಡಿದರೆ ದೃಷ್ಠಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸಾಹು ಮಹರಾಜ್ ಅವರ ಕೊಡುಗೆಗಳು ಅಪಾರವಾಗಿದೆ, ಪ್ರಪಂಚಕ್ಕೆ ಅಂಬೇಡ್ಕರ್ ಅವರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಮಹಾಮಾನವತಾವಾದಿಗಳ ಮಾರ್ಗದರ್ಶನ, ಅಪಾರ ವಿದ್ವತ್ ಪಡೆದ ಮಹಾಜ್ಞಾನಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜೀವಂತವಾಗಿಡಲು ಎಲ್ಲರೂ ಶ್ರಮಿಸೋಣ ಎಂದರು.
ಇದೇ ಸಂದರ್ಭದಲ್ಲಿ ಸುಮಾರು 150 ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆಗೆ ನೋದಣಿ ಮಾಡಿಕೊಂಡು, ಆರೋಗ್ಯ ಪರೀಕ್ಷೆಗೆ ಒಳಗಾಗಿ ಆರೋಗ್ಯ ಸೌಲಭ್ಯ ಪಡೆದರು.
ಕಾರ್ಯಕ್ರಮದಲ್ಲಿ ಎಸ್ಸಿ ಎಸ್ಟಿ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ಗುರುಮೂರ್ತಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಅಧ್ಯಕ್ಷ ಅಂದಾನಿ, ನೆಲದನಿ ಬಳಗದ ಅಧ್ಯಕ್ಷ ಮಂಗಲ ಎಂ.ಲಂಕೇಶ್, ವರ್ಧಮಾನ್ ಜೈನ್ ನೇತ್ರಾಲಯ ವೈದ್ಯ ಡಾ.ಋಷಭೇಂದ್ರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಸಂಘದ ಪದಾಧಿಕಾರಿಗಳಾದ ಬಸಂತಮ್ಮ, ದುಂಡಿಲಿಂಗರಾಜ್, ನೆಲದನಿ ಸುಬ್ರಮಣ್ಯ, ತಗ್ಗಹಳ್ಳಿ ಮಂಜು ಮತ್ತಿತರರಿದ್ದರು.