ಭಾರತದ ಶಿವಾಂಕ ಭಟ್ನಾಗರ ಅನಿರೀಕ್ಷಿತ ಗೆಲುವಿನೊಂದಿಗೆ ಮಂಡ್ಯದಲ್ಲಿ ನಡೆದಿರುವ ಪಿಇಟಿ ಐಟಿಎಫ್ ಮಂಡ್ಯ ಓಪನ್ 2024 ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳ ಅಂತಿಮ ಹಂತ ಪ್ರವೇಶಿಸಿದ್ದಾರೆ.
ಮಂಡ್ಯನಗರದ ಪಿಇಟಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 23 ವರ್ಷ ವಯಸ್ಸಿನ ಶಿವಾಂಕ 14ನೇ ಶ್ರೇಯಾಂಕ ಹೊಂದಿದ್ದ ಭರತ್ ನಿಶೊಕ್ ಕುಮಾರನ್ ಅವರ ಎದುರು 6-3, 7-6 ನೇರ ಸೆಟ್ಗಳ ಗೆಲುವು ದಾಖಲಿಸಿ ಮುನ್ನಡೆದರು.
ಶ್ರೇಯಾಂಕದಲ್ಲಿ ಭರತ್ ಅವರಿಗಿಂತ 93 ಸ್ಥಾನಗಳಷ್ಟು ಕೆಳಗಿರುವ ಶಿವಾಂಕ, ಮೊದಲ ಸೆಟ್ಟಿನ ಎರಡನೇ ಆಟದಲ್ಲಿಯೇ ಎದುರಾಳಿಯ ಸರ್ವಿಸ್ ಮುರಿದು 3-0 ಆಟಗಳಿಂದ ಮುನ್ನಡೆದರು. ಮುಂದೆ ಅಟಗಾರರಿಬ್ಬರೂ ತಮ್ಮ ತಮ್ಮ ಸರ್ವಿಸ್ಗಳನ್ನು ಉಳಿಸಿಕೊಳ್ಳುತ್ತ ನಡೆಯುವುದರೊಂದಿಗೆ ಶಿವಾಂಕ ಮೊದಲ ಸೆಟ್ಟನ್ನು 6-3 ಆಟಗಳಿಂದ ತಮ್ಮದಾಗಿಸಿಕೊಂಡರು. ಆದರೆ ತೀವ್ರ ತುರುಸಿನಿಂದ ನಡೆದ ಎರಡನೇ ಸೆಟ್ಟನ್ನು ನಿರ್ಧರಿಸಲು ‘ಟೈ ಬ್ರೇಕರ್’ ಅಳವಡಿಸಬೇಕಾಯಿತು. ಇದರಲ್ಲಿ 25 ವರ್ಷ ವಯಸ್ಸಿನ ಎದುರಾಳಿಗೆ ಯಾವುದೇ ಅವಕಾಶ ನೀಡದ ಶಿವಾಂಕ ‘ಟೈ ಬ್ರೇಕರ್’ನಲ್ಲಿ 7-1 ಆಟಗಳ ಗೆಲುವು ಸಾಧಿಸಿದರು.
ಅನಿರೀಕ್ಷಿತ ಫಲಿತಾಂಶ ಕಂಡ ಇನ್ನುಳಿದ ಪಂದ್ಯಗಳಲ್ಲಿ ಫೈಸಲ್ ಖಮರ್ 15ನೇ ಸೀಡ್ ರೋಹನ್ ಮೆಹ್ರಾ ಎದುರು 5-7, 6-4, 10-1 ಆಟಗಳಿಂದ ಗೆದ್ದರೆ, ನೆದರ್ಲೆಂಡ್ಸ್ನ ಥಿಜ್ಮೆನ್ ಲೂಫ್ 10ನೇ ಶ್ರೇಯಾಂಕ ಹೊಂದಿದ್ದ ಮೊರೊಕ್ಕೊದ ಇಮ್ರಾನ್ ಸಿಬಿಲ್ಲೆ ಅವರನ್ನು 6-1, 6-0 ಆಟಗಳಿಂದ ಹಣಿದರು.
ಮಾಜಿ ಡೇವಿಸ್ ಕಪ್ ಆಟಗಾರ ಹಾಗೂ ಏಷ್ಯನ್ ಕ್ರೀಡಾಕೂಟದ ಪದಕ ವಿಜೇತ ವಿಷ್ಣು ವರ್ಧನ ದಿಟ್ಟ ಹೋರಾಟ ಪ್ರದರ್ಶಿಸಿದ ಧೀರಜ್ ಕೊಡಂಚಾ ಶ್ರೀನಿವಾಸನ್ ಅವರನ್ನು 6-0, 6-7(6), 10-5 ಅಟಗಳಿಂದ ಬದಿಗೊತ್ತಿದರೆ, ಅಂಕಣದಲ್ಲಿರುವ ಹದಿನಾರು ಆಟಗಾರರ ಪೈಕಿ ಅತ್ಯಂತ ಕಿರಿಯ, ‘ಲೋಕಲ್ ಬಾಯ್’ ಎಸ್ವಿ ಪ್ರಜ್ವಲ್ ಹೆಚ್ಚಿನ ಪ್ರತಿರೋಧವೊಡ್ಡದೇ ಒಂಭತ್ತನೇ ಶ್ರೇಯಾಂಕಿತ ಆಸ್ಟೆçÃಲಿಯಾದ ಮ್ಯಾಟ್ ಹುಲ್ಮೆ ಅವರ ಅನುಭವದ ಎದುರು 6-0, 6-1 ಆಟಗಳಿಂದ ಸುಲಭವಾಗಿ ಶರಣಾದರು.