Tuesday, April 30, 2024

ಪ್ರಾಯೋಗಿಕ ಆವೃತ್ತಿ

ವಿಶ್ವಗುರುವಿನ ವೇದ ಗಣಿತ

✍️ ಶಿವಸುಂದರ್

೧.
ಒಬ್ಬರಿಗೆ ಎರಡೆರೆಡು
ಲಸಿಕೆಯಾದರೆ
ನೂರುಕೋಟಿ ಜನರಿಗೆ
ಎಷ್ಟು ಕೋಟಿ ಲಸಿಕೆ?

ವಿದೇಶಿ ಗಣಿತ- ಇನ್ನೂರು ಕೋಟಿ

ವೇದ ಗಣಿತ-ಇಪ್ಪತ್ತು ಕೋಟಿ

ಕಾರಣ ಶುದ್ದಗಣಿತವು
ಅವೈದಿಕರನ್ನು ಲೆಕ್ಕಿಸಿ
ಮೈಲಿಗೆಯಾಗುವುದಿಲ್ಲ…

೨.
ಕೋವಿಡ್ ಹೆಣಗಳ ಸಂಖ್ಯೆ
ಹತ್ತು ಲಕ್ಷವಾದರೆ
ಕೋವಿಡ್ ಸಾವುಗಳ
ಸಂಖ್ಯೆಯೆಷ್ಟು?

ವಿದೇಶಿ ಗಣಿತ- ಹತ್ತು ಲಕ್ಷ
ವೇದಗಣಿತ- ಹತ್ತು ಸಾವಿರ

ವಿದೇಶೀಯರು ಲೌಕಿಕರು ..
ಅಲೌಕಿಕ ಅರಿಯರು

ಆತ್ಮಕ್ಕೆ ಸಾವಿಲ್ಲ…

ಹೆಣವೆಂದರೆ ಒಗೆಯಲು
ಹಾಕಿದ ಕೊಳಕು ಬಟ್ಟೆಯೇ
ಹೊರತು ಸಾವಿನ ಪುರಾವೆಯಲ್ಲ…

೩.
ಬಹುಜನರ ಆದಾಯವು
ಅರ್ಧಕ್ಕರ್ಧ ಕಡಿಮೆಯಾದರೆ
ದೇಶದ ಆದಾಯ
ಕಡಿಮೆಯಾಗುವುದೇ?

ವಿದೇಶಿ ಗಣಿತ- ಕಡಿಮೆಯಾಗುವುದು

ವೇದಗಣಿತ- ದೇಶದ ಆದಾಯ ಹೆಚ್ಚುವುದು…

ವಿದೇಶೀಯರು
ಚಾರ್ವಾಕರು
ತಿಂದುಣ್ಣುವ
ವೆಚ್ಚ ವ್ಯಸನಿಗಳು…

ಮರ್ತ್ಯಕ್ಕೆ ತೂಗುಬಿದ್ದ
ಗಾವಿಲರು
ಆರ್ಯ ಆಧ್ಯಾತ್ಮದ
ಆರ್ಥಿಕತೆ ಅರಿಯರು..

ಮರುಳರೇ ಅರಿಯಿರಿ:

ಉಪವಾಸವೆಂದರೆ
ಉಳಿತಾಯ…

ಹೆಚ್ಚು ಉಪವಾಸ
ಹೆಚ್ಚು ಉಳಿತಾಯ!

ಹೆಚ್ಚು ಉಳಿತಾಯ
ಹೆಚ್ಚು ಅಭಿವೃದ್ಧಿ…!

ದುರ್ಬಲರು ಸಾಯುತ್ತಾರೆ
ಸಬಲರು ಉಳಿಯುತ್ತಾರೆ..

ದುರ್ಬಲರು ಸತ್ತಷ್ಟು
ಆರ್ಥಿಕತೆ ಸಬಲ-ಸಂಪನ್ನ

ಇದೇ ವಿಶ್ವ ಗುರುವಿನ
ಮಹಾನ್ ವ್ಯೂಹತಂತ್ರ….

ಆರ್ಯಭಾರತದಲ್ಲಿ
ಸಾವಿಗೂ ಸಮಪಾತ್ರ..

ಉಪವಾಸವೂ
ಒಂದು ಕಾರ್ಯತಂತ್ರ…

ಬನ್ನಿ..

ಹರುಷದಿಂದ ಹಸಿಯೋಣ
ಖುಷಿಯಿಂದ ಸಾಯೋಣ..

ವೇದಗಣಿತದ ಹಿರಿಮೆಯನ್ನು
ಜಗಕೆಲ್ಲಾ ಸಾರೋಣ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!