✍️ ಶಿವಸುಂದರ್
೧.
ಒಬ್ಬರಿಗೆ ಎರಡೆರೆಡು
ಲಸಿಕೆಯಾದರೆ
ನೂರುಕೋಟಿ ಜನರಿಗೆ
ಎಷ್ಟು ಕೋಟಿ ಲಸಿಕೆ?
ವಿದೇಶಿ ಗಣಿತ- ಇನ್ನೂರು ಕೋಟಿ
ವೇದ ಗಣಿತ-ಇಪ್ಪತ್ತು ಕೋಟಿ
ಕಾರಣ ಶುದ್ದಗಣಿತವು
ಅವೈದಿಕರನ್ನು ಲೆಕ್ಕಿಸಿ
ಮೈಲಿಗೆಯಾಗುವುದಿಲ್ಲ…
೨.
ಕೋವಿಡ್ ಹೆಣಗಳ ಸಂಖ್ಯೆ
ಹತ್ತು ಲಕ್ಷವಾದರೆ
ಕೋವಿಡ್ ಸಾವುಗಳ
ಸಂಖ್ಯೆಯೆಷ್ಟು?
ವಿದೇಶಿ ಗಣಿತ- ಹತ್ತು ಲಕ್ಷ
ವೇದಗಣಿತ- ಹತ್ತು ಸಾವಿರ
ವಿದೇಶೀಯರು ಲೌಕಿಕರು ..
ಅಲೌಕಿಕ ಅರಿಯರು
ಆತ್ಮಕ್ಕೆ ಸಾವಿಲ್ಲ…
ಹೆಣವೆಂದರೆ ಒಗೆಯಲು
ಹಾಕಿದ ಕೊಳಕು ಬಟ್ಟೆಯೇ
ಹೊರತು ಸಾವಿನ ಪುರಾವೆಯಲ್ಲ…
೩.
ಬಹುಜನರ ಆದಾಯವು
ಅರ್ಧಕ್ಕರ್ಧ ಕಡಿಮೆಯಾದರೆ
ದೇಶದ ಆದಾಯ
ಕಡಿಮೆಯಾಗುವುದೇ?
ವಿದೇಶಿ ಗಣಿತ- ಕಡಿಮೆಯಾಗುವುದು
ವೇದಗಣಿತ- ದೇಶದ ಆದಾಯ ಹೆಚ್ಚುವುದು…
ವಿದೇಶೀಯರು
ಚಾರ್ವಾಕರು
ತಿಂದುಣ್ಣುವ
ವೆಚ್ಚ ವ್ಯಸನಿಗಳು…
ಮರ್ತ್ಯಕ್ಕೆ ತೂಗುಬಿದ್ದ
ಗಾವಿಲರು
ಆರ್ಯ ಆಧ್ಯಾತ್ಮದ
ಆರ್ಥಿಕತೆ ಅರಿಯರು..
ಮರುಳರೇ ಅರಿಯಿರಿ:
ಉಪವಾಸವೆಂದರೆ
ಉಳಿತಾಯ…
ಹೆಚ್ಚು ಉಪವಾಸ
ಹೆಚ್ಚು ಉಳಿತಾಯ!
ಹೆಚ್ಚು ಉಳಿತಾಯ
ಹೆಚ್ಚು ಅಭಿವೃದ್ಧಿ…!
ದುರ್ಬಲರು ಸಾಯುತ್ತಾರೆ
ಸಬಲರು ಉಳಿಯುತ್ತಾರೆ..
ದುರ್ಬಲರು ಸತ್ತಷ್ಟು
ಆರ್ಥಿಕತೆ ಸಬಲ-ಸಂಪನ್ನ
ಇದೇ ವಿಶ್ವ ಗುರುವಿನ
ಮಹಾನ್ ವ್ಯೂಹತಂತ್ರ….
ಆರ್ಯಭಾರತದಲ್ಲಿ
ಸಾವಿಗೂ ಸಮಪಾತ್ರ..
ಉಪವಾಸವೂ
ಒಂದು ಕಾರ್ಯತಂತ್ರ…
ಬನ್ನಿ..
ಹರುಷದಿಂದ ಹಸಿಯೋಣ
ಖುಷಿಯಿಂದ ಸಾಯೋಣ..
ವೇದಗಣಿತದ ಹಿರಿಮೆಯನ್ನು
ಜಗಕೆಲ್ಲಾ ಸಾರೋಣ…