ಮಂಡ್ಯ ನಗರದ ಗುರುಶ್ರೀ ಚಿತ್ರಮಂದಿರದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ‘ಯುವ’ ಚಿತ್ರದ ಪ್ರಚಾರಕ್ಕೆ ಆಗಮಿಸಿದ ನಟ ಯುವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ಕಳೆದ ಮಾರ್ಚ್ 29 ರಂದು ರಾಜ್ಯಾದ್ಯಂತ ತೆರೆಕಂಡಿರುವ ಡಾ. ರಾಜಕುಮಾರ್ ಕುಟುಂಬದ ಕುಡಿ, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್ ಅಭಿನಯದ ಯುವ ಚಿತ್ರ ಪ್ರೇಕ್ಷಕರ ಮನಸೂರೆಗೊಂಡಿದೆ.ಈ ಹಿನ್ನಲೆಯಲ್ಲಿ ಪ್ರಚಾರ ಕಾರ್ಯ ಕೈ ಗೊಂಡಿರುವ ಯುವರಾಜ್ ಕುಮಾರ್ ಇಂದು ಬೆಳಿಗ್ಗೆ ನಗರದ ಗುರುಶ್ರೀ ಚಿತ್ರಮಂದಿರಕ್ಕೆ ಆಗಮಿಸಿ, ಅಭಿಮಾನಿಗಳ ನಡುವೆ ಚಿತ್ರ ವೀಕ್ಷಿಸಿ ಸಂಭ್ರಮಿಸಿದರು. ಯುವ ಮುಖಂಡ ಬಿ.ಆರ್ ಸುರೇಶ್ ಹಾಗೂ ಸ್ನೇಹಿತರು ಯುವರಾಜ್ ಕುಮಾರ್ ಅವರಿಗೆ ಪುಷ್ಪ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವರಾಜ್ ಕುಮಾರ್, ಮಂಡ್ಯದ ಅಭಿಮಾನಿಗಳು ನೀಡಿದ ಅದ್ದೂರಿ ಸ್ವಾಗತದಿಂದ ಸಂತೋಷವಾಗಿದೆ. ನಿಮ್ಮ ಪ್ರೀತಿ,ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಕುಟುಂಬದ ಮೇಲೆ ನೀವು ಇಟ್ಟಿರುವ ಅಭಿಮಾನಕ್ಕೆ ಎಂದೆಂದಿಗೂ ಚಿರೃಣಿ. ಯುವ ಚಿತ್ರ ಎಲ್ಲಾ ಪ್ರೇಕ್ಷಕರಿಗೂ ಇಷ್ಟವಾಗಿದ್ದು, ರಾಜ್ಯಾದ್ಯಂತ ಅಭಿಮಾನಿಗಳು ಸಂತೋಷದಿಂದ ಚಿತ್ರಮಂದಿರಕ್ಕೆ ಆಗಮಿಸಿ, ಚಿತ್ರದ ಯಶಸ್ವಿಗೆ ಕಾರಣರಾಗಿದ್ದಾರೆ. ಅವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ.ನಿಮ್ಮ ಪ್ರೀತಿ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಎಂದರು.
ನಂತರ ಮಂಡ್ಯದ ಕಲ್ಲಹಳ್ಳಿಯಲ್ಲಿರುವ ಮನ್ಮುಲ್ ಮಾಜಿ ಅಧ್ಯಕ್ಷ ಬಿ. ಆರ್.ರಾಮಚಂದ್ರು ರವರ ನಿವಾಸಕ್ಕೆ ಆಗಮಿಸಿದ ಯುವರಾಜ್ ಕುಮಾರ್ ರವರಿಗೆ ಪುಷ್ಪ ಹಾರ ಹಾಕಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಬಿ.ಆರ್.ರಾಮಚಂದ್ರು,ಹಾಗೂ ಸುರೇಶ್ ಯುವರಾಜ್ ಅವರಿಗೆ ಯುವ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಕೋರಿದರು.
ಚೇತನ್ ಹೇಮಂತ್ ಸೇರಿದಂತೆ ಹಲವರಿದ್ದರು.